ಮುಂಬೈ: ಗಣೇಶೋತ್ಸವದ ಸಂಭ್ರಮ ಎಂದಾಕ್ಷಣ ನೆನಪಿಗೆ ಬರುವುದು ಮಹಾರಾಷ್ಟ್ರ. ಅದರಲ್ಲಿಯೂ ಮುಂಬೈನಲ್ಲಿ ಗಣೇಶೋತ್ಸವ ಭರ್ಜರಿಯಾಗಿ, ಅದ್ಧೂರಿಯಾಗಿ ನಡೆಯುತ್ತದೆ. ಇನ್ನೇನು ಹಬ್ಬಕ್ಕೆ 10 ದಿನಗಳು ಬಾಕಿ ಇವೆ. ಇದರ ನಡುವೆಯೇ ಮಹಾರಾಷ್ಟ್ರದ ಜನತೆ ಬೆಚ್ಚಿಬೀಳುವ ಘಟನೆ ನಡೆದಿದೆ.
ಎರಡು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಬೋಟ್ಗಳಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.
ಮಹಾರಾಷ್ಟ್ರದ ರಾಯಗಢದ ಸಮುದ್ರದಲ್ಲಿ ಹರಿಹರೇಶ್ವರ ಬೀಚ್ ಬಳಿ ಬೋಟ್ನಲ್ಲಿ ಎಕೆ-47 ರೈಫಲ್ಗಳು, ಕೆಲವು ಬುಲೆಟ್ಗಳು ಸೇರಿದಂತೆ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಮುಂಬೈನಿಂದ 190 ಕಿಮೀ ದೂರದಲ್ಲಿರುವ ಬೋಟ್ನಲ್ಲಿ ಸಿಬ್ಬಂದಿ ಇಲ್ಲದಿದ್ದ ಬೋಟ್ನ್ನು ಕೆಲವು ಸ್ಥಳೀಯರು ಗಮನಿಸಿ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ. ಆಗ ಈ ಘಟನೆ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕರಾವಳಿ ತೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಗಣೇಶೋತ್ಸವವನ್ನೇ ಟಾರ್ಗೆಟ್ ಮಾಡಿಕೊಂಡು ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿದ್ದರೆ ಎನ್ನುವ ಸಂದೇಹವನ್ನು ತನಿಖಾಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ. ದೋಣಿ ಪತ್ತೆಯಾಗಿರುವ ಪ್ರದೇಶ ಮುಂಬೈನಿಂದ 200 ಕಿಲೋ ಮೀಟರ್ ಹಾಗೂ ಪುಣೆಯಿಂದ 170 ಕಿಲೋ ಮೀಟರ್ ದೂರದಲ್ಲಿದೆ. ಮಹಾರಾಷ್ಟ್ರದಲ್ಲಿ ಮುಂದಿನ ಕೆಲವು ದಿನಗಳಲ್ಲಿ ನಿರಂತರವಾಗಿ ಹಬ್ಬಗಳು ಬರಲಿದ್ದು ಇದರ ಬೆನ್ನಲ್ಲೇ ಘಟನೆ ನಡೆದಿರುವುದು ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಘಟನೆಯ ಕುರಿತು ವಿಶೇಷ ತನಿಖೆ ನಡೆಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಮಾಡಿರುವುದಾಗಿ ರಾಯಗಢ ಶಾಸಕಿ ಅದಿತಿ ತಟ್ಕರೆ ಹೇಳಿದ್ದಾರೆ. ಗಣೇಶೋತ್ಸವಕ್ಕೆ ಕೇವಲ 10 ದಿನಗಳು ಮಾತ್ರ ಇವೆ. ಲಕ್ಷಾಂತರ ಮಂದಿ ಮಹಾರಾಷ್ಟ್ರಕ್ಕೆ ಆಗಮಿಸುತ್ತಾರೆ. ಇಂಥ ಸಂದರ್ಭದಲ್ಲಿ ಇದು ನಡೆದಿರುವುದು ಆಘಾತಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.