ಬದಿಯಡ್ಕ: ಕಲೆಯನ್ನು ಪ್ರೀತಿಸುವ ಮನಸ್ಸು ಪ್ರತಿಯೊಬ್ಬರಲ್ಲೂ ಇದ್ದರೆ ಕಲಾವಿದನೂ ಬೆಳಗುತ್ತಾನೆ. ಭಾಗವತ ಸಪ್ತಾಹದೊಂದಿಗೆ ಯಕ್ಷಗಾನ ಸಪ್ತಾಹವೂ ನಡೆದು ಹಿರಿಯ ಗುರುಗಳ ಆಶಯವು ನೆರವೇರಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಆಶೀರ್ವಚನವನ್ನು ನೀಡಿದರು.
ಎಡನೀರು ಮಠದಲ್ಲಿ ಶ್ರೀಗಳ ದ್ವಿತೀಯ ಚಾತುರ್ಮಾಸ್ಯದ ಅಂಗವಾಗಿ ನಡೆದ ಶ್ರೀಮದ್ ಭಾಗವತ ಸಪ್ತಾಹ ಮತ್ತು ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಸಮಾರೋಪಸಮಾರಂಭದಲ್ಲಿ ಭಕ್ತರನ್ನುದ್ದೇಶಿಸಿ ಅವರು ಮಾತನಾಡಿದರು.
ವಿದ್ವಾನ್ ಪಂಜ ಭಾಸ್ಕರ ಭಟ್ ಸಮಾರೋಪ ಭಾಷಣದಲ್ಲಿ ಭಾಗವತ, ಪುರಾಣ ವಾಚನ, ಕಥಾಪ್ರವಚನ, ಕಥಾಶ್ರವಣದಂತಹ ಸತ್ಕಾರ್ಯದೊಂದಿಗೆ ತಾಳಮದ್ದಳೆ ಕಾರ್ಯಕ್ರಮವೂ ನಡೆದಿರುವುದು ಶ್ರೀಕೃಷ್ಣ ಸಾನ್ನಿಧ್ಯಕ್ಕೆ ಪೂರಕವಾಗಲಿದೆ. ಭಗವಂತನ ಆರಾಧನೆಗೆ ಮೀಸಲಾದ ಕಲೆ ಯಕ್ಷಗಾನ. ಆ ಮಾಧ್ಯಮದ ಮೂಲಕ ಕೃಷ್ಣ ಚಾರಿತ್ರ್ಯಮಂಜರಿ ತಾಳಮದ್ದಳೆಯು ಇಲ್ಲಿ ಪ್ರಸ್ತುತಗೊಂಡಿದೆ. ದೇವರಿಗೆ ಅತೀ ಪ್ರಿಯವಾದ ಕಲೆ ಯಕ್ಷಗಾನ. ಆದುದರಿಂದಲೇ ಹಿಂದಿನ ಕಾಲದಿಂದಲೇ ದೇವಸ್ಥಾನಗಳ ಮೇಳಗಳು ಯಕ್ಷಗಾನ ಕಲೆಯನ್ನು ಮುಂದುವರಿಸಿಕೊಂಡು ಬರುತ್ತಿದೆ ಎಂದರು.
ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಹಾಗೂ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಿರಿಯರಾದ ಡಾ. ಬಿ.ಎಸ್.ರಾವ್ ಶ್ರೀಗಳಿಗೆ ಹಾರಾರ್ಪಣೆಗೈದರು. ಭಾಗವತ ಸಪ್ತಾಹ ನಡೆಸಿಕೊಟ್ಟ ವೇದಮೂರ್ತಿ ಹಿರಣ್ಯ ವೆಂಕಟೇಶ್ವರ ಭಟ್, ವೇದಮೂರ್ತಿ ಅನಂತ ನಾರಾಯಣ ಭಟ್ ಪರಕ್ಕಜೆ, ವೇದಮೂರ್ತಿ ಹರಿನಾರಾಯಣ ಮಯ್ಯ ಉಪಸ್ಥಿತರಿದ್ದರು. ತಾಳಮದ್ದಳೆಯನ್ನು ಸಂಯೋಜಿಸಿದ ವಾಸುದೇವ ರಂಗ ಭಟ್ ನಿರೂಪಿಸಿದರು. ಶ್ರೀಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ, ರಾಘವೇಂದ್ರ ಕೆದಿಲಾಯ ಎಡನೀರು ಉಪಸ್ಥಿತರಿದ್ದರು. ವಿದ್ವಾನ್ ಬಳ್ಳಪದವು ಯೋಗೀಶ ಶರ್ಮ ಪ್ರಾರ್ಥನೆ ಹಾಡಿದರು. ನಂತರ ಪ್ರಸಿದ್ಧ ಕಲಾವಿದರಿಂದ ಭೀಷ್ಮಾರ್ಜುನ ಯಕ್ಷಗಾನ ತಾಳಮದ್ದಳೆ ಜರಗಿತು.
ಎಡನೀರು ಮಠದಲ್ಲಿ ಭಾಗವತ ಸಪ್ತಾಹ, ತಾಳಮದ್ದಳೆ ಸಪ್ತಾಹ ಸಮಾರೋಪ
0
August 07, 2022