ಪೆರ್ಲ: ಪೆರ್ಲ ನಾಲಂದಾ ಮಹಾ ವಿದ್ಯಾಲಯ ಗ್ರಾಮವಿಕಾಸ ಯೋಜನೆ ಆಶ್ರಯದಲ್ಲಿ ಪೆರ್ಲದ ವಿವೇಕಾನಂದ ಶಿಶುಮಂದಿರದಲ್ಲಿ ನಡೆದ ಎರಡು ದಿನಗಳ 'ಫ್ಯಾಶನ್ ಡಿಸೈನಿಂಗ್' ತರಬೇತಿ ಶಿಬಿರ ಸಂಪನ್ನಗೊಂಡಿತು.
ಕಾಲೇಜು ಪ್ರಾಂಶುಪಾಲ ಡಾ.ಕಿಶೋರ್ ಕುಮಾರ್ ರೈ ಶೇಣಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮವಿಕಾಸ ಯೋಜನೆ ಮೂಲಕ ಗ್ರಾಮಸ್ಥರಿಗೆ ಸಹಕಾರಿಯಾಗುವ ಹಲವು ಯೋಜನೆಗಳನ್ನು ಕೈಗೊಳ್ಳುತ್ತಿದೆ.ಗ್ರಾಮಸ್ಥರು ವಿಶೇಷ ಆಸಕ್ತಿ ವಹಿಸಿದಲ್ಲಿ ಈ ರೀತಿಯ ಶಿಬಿರಗಳನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ಇದೆ.ಎಲ್ಲರೂ ಈ ರೀತಿಯ ಶಿಬಿರಗಳ ಸದುಪಯೋಗ ಪಡೆಯಬೇಕು ಎಂದರು.
ಕಾಲೇಜು ಆಡಳಿತ ಮಂಡಳಿ ಸದಸ್ಯೆ ಪ್ರಭಾವತಿ ಮಾತನಾಡಿ, ಓರ್ವ ಮಹಿಳೆ ವಿದ್ಯೆಯನ್ನು ಪಡೆಯುವುದರಿಂದ ಒಂದು ಕುಟುಂಬವನ್ನು ಬೆಳಗಬಹುದು.ಮಹಿಳೆಯರು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕು ಎಂದರು.
ಗ್ರಾಮವಿಕಾಸ ಯೋಜನೆಯ ಸಂಚಾಲಕ ವೇಣುಗೋಪಾಲ ಸಾಲೆತ್ತಡ್ಕ ಮಾತನಾಡಿ, ಜೀವನದಲ್ಲಿ ಹೊಸತನವನ್ನು ಅಳವಡಿಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಕೌಶಲ್ಯಗಳಿಗೆ ಸಾಕಷ್ಟು ಬೇಡಿಕೆಯಿದೆ. ಶಿಬಿರವು ಯಶಸ್ವಿಯಾಗಿರುವುದು ಸಂತೋಷ ತಂದಿದೆ ಎಂದರು. ಸಂಪನ್ಮೂಲ ವ್ಯಕ್ತಿ ವಿದ್ಯಾ ಎಡಮಲೆ ಮಾತನಾಡಿ, ಶಿಬಿರದಲ್ಲಿ ಭಾಗವಹಿಸುವ ಮೂಲಕ ತಿಳಿದ ವಿದ್ಯೆಯನ್ನು ಇತರರಿಗೆ ತಿಳಿಸಿ ಕೊಟ್ಟುದಕ್ಕಾಗಿ ಸಂತೋಷ ಪಡುತ್ತಿದ್ದೇನೆ ಎಂದರು.ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಗ್ರಾಮವಿಕಾಸ ಸಮಿತಿಯ ಶ್ಯಾಮಲಾ ಪತ್ತಡ್ಕ ಪ್ರಾರ್ಥಿಸಿದರು.ಮಹಿಳಾ ಕಾರ್ಯ ಪ್ರಮುಖ್ ನಳಿನಿ ಸೈಪಂಗಲ್ಲು ಸ್ವಾಗತಿಸಿ ನಿರೂಪಿಸಿದರು.ವಾಣಿಜ್ಯ ವಿಭಾಗ ಮುಖ್ಯಸ್ಥ ಶ್ರೀನಿಧಿ ಕೊಲ್ಲೆಂಕಾನ ವಂದಿಸಿದರು.

.jpg)
.jpg)
