ಕನ್ಯಾಕುಮಾರಿ: 'ಆರೆಸ್ಸೆಸ್ ಮತ್ತು ಬಿಜೆಪಿ ದೇಶದಲ್ಲಿ ಮಾಡಿರುವ ಹಾನಿ ಸರಿಪಡಿಸಿ, ಭಾರತ ಜೋಡಿಸುವುದು ಈ ಯಾತ್ರೆಯ ಉದ್ದೇಶ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿಯ 'ಪರಿವಾರ್ ಬಚಾವೋ' ಟೀಕೆಗೆ ತಿರುಗೇಟು ನೀಡಿದ್ದಾರೆ.
ಕನ್ಯಾಕುಮಾರಿಯಿಂದ ಪ್ರಾರಂಭವಾದ 'ಭಾರತ ಒಗ್ಗೂಡಿಸಿ' ಯಾತ್ರೆಯ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯು ದೇಶದ ಪ್ರಮುಖ ಸಂಸ್ಥೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಅಲ್ಲದೆ, ಅವರಿಗೆ ಯಾರೆಲ್ಲ ವಿರುದ್ಧವಾಗಿದ್ದಾರೆಯೋ ಅವರೆಲ್ಲರ ಮೇಲೆ ಒತ್ತಡ ಹೇರುವ ತಂತ್ರ ಮಾಡುತ್ತಿದೆ' ಎಂದು ಆರೋಪಿಸಿದರು.
'ಭಾರತ ಜೋಡಿಸಿ ಯಾತ್ರೆಯು ಒಂದು ಪ್ರತ್ಯೇಕ ಪ್ರಯತ್ನವಾಗಿದ್ದರೂ ವಿರೋಧ ಪಕ್ಷಗಳಲ್ಲಿ ಏಕತೆ ಮೂಡಲು ನೆರವಾಗಲಿದೆ. ಜನರ ಸಂಪರ್ಕ ಸಾಧಿಸುವುದು, ಜನರ ಮಾತುಗಳನ್ನು ಆಲಿಸುವುದು, ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಕೆಲವು ಗಂಭೀರ ವಿಷಯಗಳ ಬಗ್ಗೆ ಅವರೊಂದಿಗೆ ಸಂವಹನ ನಡೆಸುವುದು ಈ ಯಾತ್ರೆಯ ಉದ್ದೇಶ' ಎಂದು ಹೇಳಿದರು.
'ಭಾರತ ಒಗ್ಗೂಡಿಸಿ' ಯಾತ್ರೆಯನ್ನು ನಾನು ಮುನ್ನಡೆಸುತ್ತಿಲ್ಲ. ನಾನು ಸಹ ಇದರಲ್ಲಿ ಭಾಗಿಯಾಗಿರುವ ಒಬ್ಬ ಪ್ರತಿನಿಧಿ. ದೇಶಕ್ಕಾಗಿ ದುಡಿಯುತ್ತಿರುವ ವಿರೋಧ ಪಕ್ಷದಲ್ಲಿರುವ ಎಲ್ಲರ ಜವಾಬ್ದಾರಿಯೂ ಇದರಲ್ಲಿದೆ' ಎಂದು ರಾಹುಲ್ ಹೇಳಿದರು.
'ಎಐಸಿಸಿ ಅಧ್ಯಕ್ಷ ಸ್ಥಾನ: ಚುನಾವಣೆ ವೇಳೆ ಪ್ರತಿಕ್ರಿಯೆ'
'ಎಐಸಿಸಿ
ಅಧ್ಯಕ್ಷ ಸ್ಥಾನದ ಸಂಬಂಧ ನಿರ್ಧಾರ ತೆಗೆದುಕೊಂಡಿದ್ದೇನೆ. ಆದರೆ, ಅಧ್ಯಕ್ಷರ ಚುನಾವಣೆ
ನಡೆದ ನಂತರವಷ್ಟೇ ಈ ಬಗ್ಗೆ ಪ್ರತಿಕ್ರಿಯಿಸುವೆ' ಎಂದು ಕಾಂಗ್ರೆಸ್ ನಾಯಕ, ಸಂಸದ
ರಾಹುಲ್ ಗಾಂಧಿ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, 'ನನ್ನ ನಿರ್ಧಾರ ಸ್ಪಷ್ಟವಾಗಿದೆ. ಪಕ್ಷದ ಚುನಾವಣೆ ಯಾವಾಗ ನಡೆಯುತ್ತದೆಯೋ ಆಗ ನಾನು ಪಕ್ಷದ ಅಧ್ಯಕ್ಷನಾಗುತ್ತೀನೊ ಅಥವಾ ಇಲ್ಲವೊ ಎನ್ನುವುದು ಸ್ಪಷ್ಟವಾಗಲಿದೆ. ದಯವಿಟ್ಟು ಆ ದಿನಕ್ಕಾಗಿ ಕಾಯಿರಿ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
2019ರಲ್ಲಿ ಪಕ್ಷಕ್ಕೆ ಚುನಾವಣೆಯಲ್ಲಿ ಎದುರಾದ ಸೋಲಿನ ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು.