ಕಾಸರಗೋಡು: ಜರ್ಮನ್ ತಂತ್ರಜ್ಞಾನ ಬಳಸಿ ಬದಿಯಡ್ಕ ಪಂಚಾಯಿತಿಯ ಬೇಳದಲ್ಲಿ ನಿರ್ಮಾಣಹಂತದಲ್ಲಿರುವ ವಾಹನ ಚಾಲನಾ ಪರೀಕ್ಷಾ ಕೇಂದ್ರ ಡಿಸೆಂಬರ್ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ಸಾರಿಗೆ ಸಚಿವ ಆಂಟನಿ ರಾಜು ತಿಳಿಸಿದ್ದಾರೆ.
ಕಾಸರಗೋಡು ಮುನ್ಸಿಪಲ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಮೋಟಾರು ವಾಹನ ಇಲಾಖೆಯ ಕುಂದುಕೊರತೆ ಪರಿಹಾರ ಅದಾಲತ್ 'ವಾಹನಿಯಂ-2022' ಉದ್ಘಾಟಿಸಿ ಮಾತನಾಡಿದರು. ಆಧುನಿಕ ಚಾಲನಾ ಪರೀಕ್ಷಾ ಕೇಂದ್ರದ ಕಾರ್ಯವೈಖರಿ ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಡಿಸೆಂಬರ್ಗೂ ಮುನ್ನ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಹೊಸ ಆರ್ಟಿ ಕಚೇರಿಗಳನ್ನು ಆರಂಭಿಸುವಾಗ ಮೊದಲ ಆದ್ಯತೆಮಂಜೇಶ್ವರಕ್ಕೆ ಲಭಿಸಲಿದೆ. ಆರ್ ಟಿ ಕಚೇರಿ ಆರಂಭಿಸಲು ಸಾರಿಗೆ ಇಲಾಖೆ ಜತೆಗೆ ಇತರೆ ಇಲಾಖೆಗಳು ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗಿದೆ. ಈ ಎಲ್ಲ ಪ್ರಕ್ರಿಯೆ ನಂತರವಷ್ಟೆ ಮಂಜೇಶ್ವರಂನಲ್ಲಿ ಆರ್ಟಿ ಕಚೇರಿ ಘೋಷಣೆ ಮಾಡಲು ಸಾಧ್ಯ ಎಂದು ಸಚಿವರು ತಿಳಿಸಿದರು. ಜಿಲ್ಲೆಯಲ್ಲಿ ಹೆಚ್ಚು ಟ್ರಾಫಿಕ್ ಅಪಘಾತಗಳು ರಾಷ್ಟ್ರೀಯ ಹೆದ್ದಾರಿ 66 ಮತ್ತು ಕೆ.ಎಸ್.ಟಿ.ಪಿ ರಸ್ತೆಯಲ್ಲಿ ನಡೆಯುತ್ತಿದ್ದು, ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲು ನ.2ರಂದು ನಡೆಯುವ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಕಾಸರಗೋಡು ಜಿಲ್ಲೆಯಲ್ಲಿ 4.7 ಲಕ್ಷ ವಾಹನಗಳಿದ್ದು, ಕಳೆದ ವಾರ ಜಿಲ್ಲೆಯಲ್ಲಿ ಮೋಟಾರು ವಾಹನ ಇಲಾಖೆ ನಡೆಸಿದ ತಪಾಸಣೆಯಲ್ಲಿ ಒಟ್ಟು 4723 ಪ್ರಕರಣಗಳು ದಾಖಲಾಗಿವೆ. 81.8 ಲಕ್ಷ ರೂ. ದಂಡ ವಿಧಿಸಲಾಗಿದೆ. ಎಂಟು ವಾಹನಗಳ ಆರ್ಸಿ ಮತ್ತು 126 ವಾಹನಗಳ ಪರವಾನಗಿ ಜತೆಗೆ 298 ವಾಹನಗಳ ಫಿಟ್ನೆಸ್ ಕೂಡ ರದ್ದಾಗಿದೆ. ಮುಂದಿನ ದಿನಗಳಲ್ಲಿ ವಾಹನ ತಪಾಸಣೆಯನ್ನು ಕಟ್ಟುನಿಟ್ಟಾಗಿ ನಡೆಸಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಸಚಿವರು ತಿಳಿಸಿದರು.
ಬೇಳದ ವಾಹನ ಚಾಲನಾ ತರಬೇತಿ ಕೇಂದ್ರ ಡಿಸೆಂಬರ್ನಲ್ಲಿ ಉದ್ಘಾಟನೆ, ಮಂಜೇಶ್ವರ ಆರ್.ಟಿ.ಓ ಕಚೇರಿಗೆ ಮೊದಲ ಆದ್ಯತೆ: ಸಚಿವ ಆಂಟನಿ ರಾಜು
0
ಅಕ್ಟೋಬರ್ 15, 2022
Tags




