HEALTH TIPS

ಇಂದು ಭಾಗಶಃ ಸೂರ್ಯಗ್ರಹಣ: ಬರಿಗಣ್ಣಿನಿಂದ ನೋಡಿದರೆ ಅಪಾಯಕಾರಿ

 

ನವದೆಹಲಿ: ಭಾರತ ಮತ್ತು ವಿಶ್ವದ ಇತರ ಕೆಲವು ಭಾಗಗಳು ಮಂಗಳವಾರ ಸಂಭವಿಸುವ ಭಾಗಶಃ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿವೆ.

ಈಶಾನ್ಯ ಪ್ರದೇಶದ ಕೆಲವು ಭಾಗಗಳನ್ನು ಹೊರತುಪಡಿಸಿ, ಭಾರತದ ಹೆಚ್ಚಿನ ಭಾಗಗಳು ಗ್ರಹಣಕ್ಕೆ ಸಾಕ್ಷಿಯಾಗಲಿದೆ. ಭಾರತದ ಬಹುತೇಕ ಎಲ್ಲ ಭಾಗಗಳಲ್ಲೂ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. 

ಬೆಂಗಳೂರಿನಲ್ಲಿ ಸಂಜೆ 5.12ರಿಂದ 5.56ರವರೆಗೆ ಅಂದರೆ 44 ನಿಮಿಷಗಳ ಕಾಲ ಗ್ರಹಣ ಗೋಚರಿಸಲಿದೆ. ಗುಜರಾತ್‌ನ ದ್ವಾರಕಾದಲ್ಲಿ ದೀರ್ಘ‌ಕಾಲ ಅಂದರೆ 1 ಗಂಟೆ 45 ನಿಮಿಷಗಳ ಕಾಲ ಗ್ರಹಣವಿರಲಿದೆ ಎಂದು ತಿಳಿದುಬಂದಿದೆ.

ದ್ವಾರಕಾ, ನವದೆಹಲಿ, ಮುಂಬೈ, ಅಹಮದಾಬಾದ್, ಸೂರತ್, ಪುಣೆ, ಜೈಪುರ, ಇಂದೋರ್, ಥಾಣೆ, ಭೋಪಾಲ್, ಲುಧಿಯಾನ, ಆಗ್ರಾ, ಚಂಡೀಗಢ, ಉಜ್ಜಯಿನಿ, ಮಥುರಾ, ಪೋರಬಂದರ್, ಗಾಂಧಿನಗರ, ಸಿಲ್ವಾಸ, ಸೂರತ್ ಮತ್ತು ಪಣಜಿ  ಒಂದು ಗಂಟೆಗೂ ಹೆಚ್ಚು ಕಾಲ ಗ್ರಹಣಕ್ಕೆ ಸಾಕ್ಷಿಯಾಗುವ ನಗರಗಳಾಗಿವೆ.

ಈ ನಡುವೆ  ಇಂದು ಘಟಿಸಲಿರುವ ಸೂರ್ಯಗ್ರಹಣವನ್ನು ನೇರವಾಗಿ ವೀಕ್ಷಿಸುವುದು ಕಣ್ಣುಗಳಿಗೆ ಅಪಾಯಕಾರಿ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. 

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯನಿಗೆ ಚಂದ್ರ ಪೂರ್ಣಪ್ರಮಾಣದಲ್ಲಿ ಅಡ್ಡವಾಗಿ ಬಂದರೆ ಖಗ್ರಾಸ ಸೂರ್ಯಗ್ರಹಣವಾಗುತ್ತದೆ. ಆದರೆ, ಈ ಬಾರಿ ಸೂರ್ಯನ ಒಂದು ಭಾಗ ಗೋಚರಿಸುತ್ತಿದ್ದು, ಪಾರ್ಶ್ವ ಸೂರ್ಯಗ್ರಹಣ ಇದಾಗಿದೆ. 

ಗ್ರಹಣದ ವೇಳೆ ರಾಜ್ಯದ ಬಹುತೇಕ ದೇವಾಲಯಗಳು ಬಂದ್
ಸೂರ್ಯಗ್ರಹಣ ವೇಳೆ ಮಂಗಳವಾರ ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಲಿವೆ. ಕುಕ್ಕೆ ಸುಬ್ರಹ್ಮಣ್ಯ, ಹಾಸನಾಂಬೆ ದೇಗುಲ ದಿನವಿಡೀ ಬಾಗಿಲು ಹಾಕಲಿದ್ದು, ಹೊರನಾಡು, ಮಂತ್ರಾಲಯ, ಕಟೀಲು, ಉಡುಪಿ ದೇವಾಲಯದಲ್ಲಿ ಗ್ರಹಣದ ವೇಳೆಯೂ ದರ್ಶನಕ್ಕೆ ಅವಕಾಶ ಇರುತ್ತದೆ. ಆದರೆ, ಪೂಜೆ ಇರುವುದಿಲ್ಲ ಎಂದು ತಿಳಿದುಬಂದಿದೆ. ಇನ್ನು ಮಲೆ ಮಹದೇಶ್ವರದಲ್ಲಿ ಗ್ರಹಣದ ವೇಳೆಯೂ ಪೂಜೆ ನಡೆಯಲಿದೆ ಎನ್ನಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries