ನವದೆಹಲಿ:ಮುಖ ದೃಢೀಕರಣ ಆಯಪ್ಲಿಕೇಶನ್ (ಫೇಸ್ ಆಥೆಂಟಿಕೇಶನ್ ಅಪ್ಲಿಕೇಶನ್) ಮೂಲಕ ಪಿಂಚಣಿದಾರರು ಡಿಜಿಟಲ್ ಜೀವನ ಪ್ರಮಾಣ ಪತ್ರ (ಲೈಫ್ ಸರ್ಟಿಫಿಕೇಟ್)ವನ್ನು ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಡುವ ಅಭಿಯಾನವನ್ನು ರಾಷ್ಟ್ರಾದ್ಯಂತ ಹಮ್ಮಿಕೊಳ್ಳುವುದಾಗಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್(Jitendra Singh) ಗುರುವಾರ ತಿಳಿಸಿದ್ದಾರೆ.
'' ಈ ಅಮೃತ ಕಾಲದಲ್ಲಿ, ಡಿಜಿಟಲ್ ಮೂಲಕ ಸಬಲೀಕರಣಗೊಂಡ ಪಿಂಚಣಿದಾರನು, ಡಿಜಿಟಲ್ ಸಶಕ್ತ ರಾಷ್ಟ್ರದ ಸೃಷ್ಟಿಗೆ ಅವಕಾಶ ಮಾಡಿಕೊಡಲಿದ್ದಾನೆ'' ಎಂದವರು ಹೇಳಿದ್ದಾರೆ. ಡಿಜಿಟಲ್ ರೂಪದಲ್ಲಿ ಜೀವನಪ್ರಮಾಣ ಪತ್ರದ ಸಲ್ಲಿಕೆಯು,ಸುಗಮ ಜೀವನಕ್ಕೆ ನೆರವಾಗಲಿದೆ ಎಂದವರು ಹೇಳಿದ್ದಾರೆ.
ಈವರೆಗೆ ಪಿಂಚಣಿದಾರರು ಪ್ರತಿವರ್ಷವೂ ದೈಹಿಕವಾಗಿ ಪಿಂಚಣಿ ವಿತರಣೆ ಪ್ರಾಧಿಕಾರಗಳ (ಬ್ಯಾಂಕ್, ಖಜಾನೆ ಕಚೇರಿ ಇತ್ಯಾದಿ) ಮುಂದೆ ಹಾಜರಾಗಬೇಕಾಗಿತ್ತು. ಇದರಿಂದಾಗಿ ವಯೋವೃದ್ಧರು, ಅನಾರೋಗ್ಯ ಪೀಡಿತ ಪಿಂಚಣಿದಾರರಿಗೆ ತೀರಾ ತೊಂದರೆಯಾಗುತ್ತಿತ್ತು. ಇದರ ಜೊತೆಗೆ ತಮ್ಮ ಜೀವನ ಪ್ರಮಾಣಪತ್ರವನ್ನು ನವೀಕರಣಗೊಂಡಿರುವ ಬಗ್ಗೆ ಪಿಂಚಣಿದಾರರಿಗೆ ಮಾಹಿತಿ ನೀಡುವ ಯಾವುದೇ ಕಾರ್ಯವಿಧಾನವು ಕೂಡಾ ಈವರೆಗೆ ಜಾರಿಯಲಿಲ್ಲಲ್ಲ.
ಆಧಾರ್ ಡಾಟಾಬೇಸ್ ಜೊತೆ ಲಿಂಕ್ ಮಾಡಲಾದ ಮುಖ ಗುರುತು ಪತ್ತೆ ತಂತ್ರಜ್ಞಾನವನ್ನು ಕೇಂದ್ರ ಸರಕಾರ ಪರಿಚಯಿಸಿದ್ದು, ಅದನ್ನು ಯಾವುದೇ ಸ್ಮಾರ್ಟ್ಫೋನ್ನಲ್ಲಿಯೂ ಅಳವಡಿಸಿಕೊಳ್ಳಬಹುದಾಗಿದೆ.
ಈ ನೂತನ ತಂತ್ರಜ್ಞಾನವನ್ನು ಉತ್ತೇಜಿಸುವಂತೆಯೂ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದ್ದು, ಈ ಬಗ್ಗೆ ಬ್ಯಾಂಕ್ಗಳಲ್ಲದೆ, ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಿದೆ.
ಈ ಮಧ್ಯೆ ಏಕೀಕೃತ ಪಿಂಚಣಿದಾರರ ಪೋರ್ಟಲ್ನ ಸಾರ್ವತ್ರೀಕರಣ ಹಾಗೂ ರಾಷ್ಟ್ರೀಯ ಅನುಭವ ಪುರಸ್ಕಾರಗಳ ವೆಬಿನಾರ್ ಸರಣಿ ಎಂಬ ಎರಡು ಉಪಕ್ರಗಳನ್ನು ಕೂಡಾ ಜಿತೇಂದ್ರ ಸಿಂಗ್ ಪ್ರಕಟಿಸಿದ್ದಾರೆ.
ಪಿಂಚಣಿದಾರರ ಪೋರ್ಟಲ್ನ ಸಾರ್ವತ್ರೀಕರಣ ಉಪಕ್ರಮದಡಿ, ಪಿಂಚಣಿ ಇಲಾಖೆಯ ಪೋರ್ಟಲ್ಗಳು ಹಾಗೂ 17 ಪಿಂಚಣಿ ವಿತರಣಾ ಬ್ಯಾಂಕುಗಳ ಪೋರ್ಟಲ್ಗಳನ್ನು ಸಂಯೋಜಿಸಲಾಗುವುದು.
ರಾಷ್ಟ್ರೀಯ ಅನುಭವ ಪುರಸ್ಕೃತರ ವೆಬಿನಾರ್ ಸರಣಿ ಯನ್ನು ಪ್ರತಿ ತಿಂಗಳು ನಡೆಸಲಾಗುವುದು ಮತ್ತು ಪ್ರತಿಯೊಂದು ವೆಬಿನಾರ್ನಲ್ಲಿಯೂ ಇಬ್ಬರು ಪುರಸ್ಕೃತರು ಭಾಗವಹಿಸಲಿದ್ದು, ಅವರು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ ಹಾಗೂ ನಿವೃತ್ತಿಗೊಳ್ಳಲಿರುವ ಉದ್ಯೋಗಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.