ಕಾಸರಗೋಡು: ಭ್ರಷ್ಟಾಚಾರ ಮುಕ್ತ ಕೇರಳದ ಉದ್ದೇಶದಿಂದ ರಾಜ್ಯ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ನೇತೃತ್ವದಲ್ಲಿ ವಿದ್ಯಾನಗರ ಚಿನ್ಮಯ ಸಭಾಂಗಣದಲ್ಲಿ ನಡೆದ ‘ನಾಗರಿಕ ಸಾವು’ ನಾಟಕ ಜನಾಕರ್ಷಣೆ ಪಡೆಯಿತು. ಲಂಚ ಸ್ವೀಕರಿಸುವಾಗ ವಿಜಿಲೆನ್ಸ್ನ ಕೈಗೆ ಸಿಕ್ಕಿಬಿದ್ದ ಸರ್ಕಾರಿ ನೌಕರನ ಕುಟುಂಬಕ್ಕೆ ಆಗುವ ದುರಂತವೇ ನಾಟಕದ ವಸ್ತು. ಎಡಿಎಂ ಎ.ಕೆ.ರಾಮೇಂದ್ರನ್ ನಾಟಕ ಉದ್ಘಾಟಿಸಿದರು. ಡಿವೈಎಸ್ಪಿ ಕೆ.ವಿ.ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.
ಲಂಚ ಪಡೆಯುವ ಅಭ್ಯಾಸದ ಪ್ರಚೋದನೆಯಿಂದ ಲಂಚ ಪಡೆದ ಮಗಳ ಗಂಡನನ್ನು ವಿಜಿಲೆನ್ಸ್ ಬಂಧಿಸಿದ ನಂತರ ಸಮಾಜದಲ್ಲಿ ನಿವೃತ್ತ ಸರ್ಕಾರಿ ನೌಕರನ ಸ್ಥಿತಿಯನ್ನು ನಾಟಕವು ಚಿತ್ರಿಸುತ್ತದೆ. ವಿಜಿಲೆನ್ಸ್ ಡೈರೆಕ್ಟರ್ ಮನೋಜ್ ಅಬ್ರಹಾಂ ಈ ನಾಟಕದ ಸೂತ್ರದಾರ. ವಿಜಿಲೆನ್ಸ್ ಅಧಿಕಾರಿಗಳು ನಾಟಕದಲ್ಲಿ ನಟಿಸಿದ್ದಾರೆ. ವಿಜಿಲೆನ್ಸ್ ಅಧಿಕಾರಿಗಳಾದ ಶರಾಫುದ್ದೀನ್, ನುಜುಮುದ್ದೀನ್, ದೀಪಕ್ ಜಾರ್ಜ್, ಆರ್ಯದೇವಿ, ಸಿಬಿ ಪಾಲ್, ಜಯಕುಮಾರ್, ಗಿರೀಶ್ ಕುಮಾರ್, ಶೀಬಾ ಕುಮಾರಿ, ಹರಿಕೃಷ್ಣನ್, ಶ್ರೀಜಿತ್ ಪಾತ್ರವರ್ಗ ನಿರ್ವಹಿಸಿದ್ದಾರೆ.
ನೇರ ಲಂಚದ ಬದಲಿಗೆ ಸುಧಾರಿತ ವ್ಯವಸ್ಥೆಗಳನ್ನು ಬಳಸಿಕೊಂಡು ಹಗರಣಗಳನ್ನು ಹಿಡಿಯಲು ವಿಜಿಲೆನ್ಸ್ ಬಳಸುವ ತಂತ್ರಗಳನ್ನು ನಾಟಕವು ಪ್ರದರ್ಶಿಸಿತು. ಎಎಸ್ಐ ವಿ.ಟಿ.ಸುಭಾμïಚಂದ್ರನ್ ಸ್ವಾಗತಿಸಿ, ಸಿವಿಲ್ ಪೊಲೀಸ್ ಅಧಿಕಾರಿ ವಿ.ರಾಜೀವನ್ ವಂದಿಸಿದರು. ಕಾಸರಗೋಡು ಸಿವಿಲ್ ಠಾಣೆಯ ಅಧಿಕಾರಿಗಳು ಹಾಗೂ ಚಿನ್ಮಯ ವಿದ್ಯಾಲಯದ ಮಕ್ಕಳು ವೀಕ್ಷಕರಾಗಿದ್ದರು.