ನವದೆಹಲಿ :ತಮ್ಮ ಸಾಂವಿಧಾನಿಕ ಸ್ಥಾನವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂಬ ಆರೋಪವನ್ನು ಬಲವಾಗಿ ತಳ್ಳಿಹಾಕಿರುವ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ರಾಜ್ಯ ಸರ್ಕಾರವು, ನಾನು 'ರಾಜಕೀಯವಾಗಿ ವಿರೋಧವಿರುವ' ಎಂದು ಪರಿಗಣಿಸುವ ಸಂಘಟನೆಗಳಿಗೆ ಸೇರಿದ ಯಾರನ್ನಾದರೂ ನೇಮಕ ಮಾಡಿದ ಒಂದು ನಿದರ್ಶನ ನೀಡಿದರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.
ಮುಖ್ಯವಾಗಿ ವಿಶ್ವವಿದ್ಯಾನಿಲಯಗಳಿಗೆ ಉಪಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ತಮ್ಮ ಮತ್ತು ಆಡಳಿತಾರೂಢ ಎಲ್ಡಿಎಫ್ ನಡುವಿನ ಕದನ ಮುಂದುವರೆದಿದ್ದು, ಸರ್ಕಾರದ ವ್ಯವಹಾರಗಳು ಕಾನೂನಿನ ಪ್ರಕಾರವೇ ನಡೆಯುವಂತೆ ನೋಡಿಕೊಳ್ಳುವುದು ತಮ್ಮ ಕೆಲಸ ಎಂದು ಖಾನ್ ಪ್ರತಿಪಾದಿಸಿದರು.
ಈ ವಾರ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಮೂರು ವರ್ಷಗಳಿಂದ ರಾಜ್ಯದ ರಾಜ್ಯಪಾಲರಾಗಿರುವ ಖಾನ್, ತಮ್ಮ ಸ್ಥಾನವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂಬ ಕಳವಳವನ್ನು ತಿರಸ್ಕರಿಸಿದರು.
"ರಾಜಕೀಯೀಕರಣ ಎಲ್ಲಿದೆ? ಕಳೆದ ಮೂರು ವರ್ಷಗಳಿಂದ ನಾನು ಆರ್ಎಸ್ಎಸ್ ಅಜೆಂಡಾವನ್ನು ಜಾರಿಗೊಳಿಸುತ್ತಿದ್ದೇನೆ ಎಂದು ಹೇಳುತ್ತಿದ್ದೀರಿ. ನನಗೆ ಒಂದು ಹೆಸರು ನೀಡಿ, ಆರೆಸ್ಸೆಸ್ ಬಿಜೆಪಿ ಸೇರಿದಂತೆ ರಾಜಕೀಯವಾಗಿ ನಿಮಗೆ ತೊಂದರೆಯಿರುವ ಸಂಘಟನೆಗಳಿಗೆ ಸೇರಿದ ಯಾರನ್ನಾದರೂ ನಾನು ನೇಮಿಸಿರುವ ಒಂದು ಉದಾಹರಣೆ ನೀಡಿ. ನನ್ನ ಅಧಿಕಾರ ಬಳಸಿ ಯಾರನ್ನಾದರೂ ಹೆಸರಿಸಿದ್ದು ಸಾಬೀತಾದರೆ ನಾನು ರಾಜೀನಾಮೆ ನೀಡುತ್ತೇನೆ" ಎಂದು ಅವರು ಹೇಳಿದರು.
ಅವರ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ನಡುವಿನ ಜಗಳದ ನಡುವೆಯೇ, ಎಡಪಕ್ಷಗಳು ಮಂಗಳವಾರ ರಾಜ್ಯ ರಾಜಧಾನಿ ತಿರುವನಂತಪುರಂನಲ್ಲಿರುವ ರಾಜಭವನಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಿದವು. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ರಾಜ್ಯ ಸರ್ಕಾರಗಳ ವಿರುದ್ಧ ರಾಜ್ಯಪಾಲರ ಕಚೇರಿಯನ್ನು ಕಣಕ್ಕಿಳಿಸುವ ಪರಿಸ್ಥಿತಿ ಇದೆ ಎಂದು ಹೇಳಿದ್ದರು.