ಪತ್ತನಂತಿಟ್ಟ: ಶಬರಿಮಲೆಯಲ್ಲಿ ಜನದಟ್ಟಣೆಯ ಮರೆಯಲ್ಲಿ ಆಕ್ಟಿವಿಸ್ಟ್ ಕಾರ್ಯಕರ್ತರಿಂದ ಧಾರ್ಮಿಕ ವಿಧಿವಿಧಾನಗಳ ಉಲ್ಲಂಘನೆ ಸಾಧ್ಯತೆ ಇದೆ ಎಂದು ವದಂತಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ ಪೋಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಶಬರಿಮಲೆ ತಲುಪುವ ಸಾಧ್ಯತೆ ಇರುವ ಆಕ್ಟಿವಿಸ್ಟ್ ಕಾರ್ಯಕರ್ತರ ಮೇಲೆ ನಿಗಾ ಇಡಲು ವಿಶೇಷ ಶಾಖೆಗೆ ಸೂಚನೆ ನೀಡಲಾಗಿದೆ. ಅಕ್ರಮ ನಡೆ ಎಂಬುದು ಕೇವಲ ವದಂತಿಯಾಗಿದ್ದು, ಅದನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಪೋಲೀಸರು ಸ್ಪಷ್ಟಪಡಿಸಿದ್ದಾರೆ.
ಮಂಡಲ ಕಾಲ ಪೂಜಾ ಅವಧಿಯ ಆರಂಭದಲ್ಲಿ, ಗೃಹ ಇಲಾಖೆಯು ಕರ್ತವ್ಯದಲ್ಲಿ ನಿಯೋಜನೆಗೊಂಡ ಪೋಲೀಸ್ ಅಧಿಕಾರಿಗಳಿಗೆ ಸೂಚನೆಗಳು ಎಂಬ ಕಿರುಪುಸ್ತಕವನ್ನು ವಿತರಿಸಿತ್ತು. ಇದು ಧಾರ್ಮಿಕ ಉಲ್ಲಂಘನೆಯ ವಿಷಯವನ್ನೂ ಒಳಗೊಂಡಿತ್ತು. ಕೇರಳ ಪೋಲೀಸರಿಗೆ ನೀಡಲಾದ ಸಾಮಾನ್ಯ ಸೂಚನೆಗಳಲ್ಲಿ ಆಚಾರ ಉಲ್ಲಂಘನೆಗೆ ಸಂಬಂಧಿಸಿದ ವಿಷಯಗಳನ್ನು ಸೇರಿಸುವುದು ಭಾರಿ ವಿವಾದಕ್ಕೆ ಕಾರಣವಾಯಿತು. ಬಿಜೆಪಿ ನಾಯಕತ್ವದಿಂದ ತೀವ್ರ ಪ್ರತಿಭಟನೆ ವ್ಯಕ್ತವಾದ ನಂತರ, ಸರ್ಕಾರವು ಕಿರುಪುಸ್ತಕವನ್ನು ಹಿಂತೆಗೆದುಕೊಂಡಿತು. ಘಟನೆಯಲ್ಲಿ ಸರ್ಕಾರ ಮತ್ತು ದೇವಸ್ವಂ ಮಂಡಳಿಗೆ ಯಾವುದೇ ದುರುದ್ದೇಶವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದರು.
2018ರ ಮಂಡಲಪೂಜಾ ಸಂದರ್ಭ ಆಕ್ಟಿವಿಸ್ಟ್ ಗಳಾದ ಕನಕದುರ್ಗ ಹಾಗೂ ಬಿಂದು ಅಮ್ಮಿಣಿ ಎಂಬ ಕಾರ್ಯಕರ್ತೆಯರು ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಧಾರ್ಮಿಕ ಉಲ್ಲಂಘನೆಗೆ ಯತ್ನಿಸಿದ್ದರು. ಲಕ್ಷಗಟ್ಟಲೆ ಭಕ್ತರ ನಂಬಿಕೆಗೆ ಸವಾಲಾಗಿ, ಪೆÇಲೀಸರ ನೆರವಿನಿಂದ ಶಬರಿಮಲೆಯಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಉಲ್ಲಂಘಿಸಲು ಯತ್ನಿಸಿದ್ದರು. ಶಬರಿಮಲೆ 18 ಮೆಟ್ಟಲನ್ನು ಏರುವ ದುರುದ್ದೇಶದಿಂದ ರಾತ್ರಿ ವೇಳೆ ಮುಖ ಮುಚ್ಚಿಕೊಂಡು ಯತ್ನಿಸಿದ ಯುವತಿಯರಿಗೆ ಪೋಲೀಸರು ಬೆಂಗಾವಲು ನೀಡಿದ್ದರು. ಪಂಬಾದಿಂದ ಮಫ್ತಿಯಲ್ಲಿ ತಲುಪಿದ ಪೋಲೀಸ್ ತಂಡ ಅವರಿಗೆ ಭದ್ರತೆ ಒದಗಿಸಿತ್ತು. ಮತ್ತು ಅವರು ಬೆಟ್ಟ ಏರುತ್ತಿರುವ ದೃಶ್ಯಗಳು ಪೋಲೀಸ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವರ ಭದ್ರತೆಗೆ ಆರು ಪೋಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು.
ಘಟನೆ ಬೆಳಕಿಗೆ ಬಂದ ನಂತರ ಬಿಜೆಪಿ ನೇತೃತ್ವದಲ್ಲಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿದ್ದವು. ದೇಶಾದ್ಯಂತದ ಭಕ್ತರು ಒಗ್ಗಟ್ಟಾಗಿ ಖಂಡಿಸಿದ್ದರು. ಸಾರ್ವಜನಿಕ ಕೋಪಕ್ಕೆ ಹೆದರಿ ಸರ್ಕಾರ ಬಳಿಕ ಈ ಕ್ರಮದಿಂದ ಹಿಂದೆ ಸರಿಯಿತು.
ಈ ವರ್ಷ ಶಬರಿಮಲೆಯಲ್ಲಿ ಭಾರೀ ಜನದಟ್ಟಣೆ ಕಂಡುಬರುತ್ತಿದೆ. ಕೋವಿಡ್ ನಿಯಂತ್ರಣಗಳ ಬಳಿಕ ಮೊದಲ ಮಂಡಲ ಋತುವಾಗಿದೆ. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನರು ಸನ್ನಿಧಿಗೆ ಭೇಟಿ ನೀಡುತ್ತಿದ್ದಾರೆ. ಈ ಧಾವಂತದ ಮರೆಯಲ್ಲಿ ಆಕ್ಟಿವಿಸ್ಟ್ ಗಳಿಂದ ಮತ್ತೆ ಆಚಾರ-ವಿಚಾರ ಉಲ್ಲಂಘಿಸುವ ಆತಂಕ ಎದುರಾಗಿದೆ.
ಶಬರಿಮಲೆಯಲ್ಲಿ ಅಕ್ಟಿವಿಸ್ಟ್ ಕಾರ್ಯಕರ್ತರಿಂದ ವಿಧಿವಿಧಾನ ಉಲ್ಲಂಘನೆಯಾಗುವ ಸೂಚನೆಗಳು: ತನಿಖೆ ತೀವ್ರಗೊಳಿಸಿದ ಪೋಲೀಸರು
0
December 13, 2022
Tags