ಕುಂಬಳೆ: ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕುಂಬಳೆ ಬಸ್ ನಿಲ್ದಾಣ ಕಮ್ ವ್ಯಾಪಾರ ಸಂಕೀರ್ಣ ನಿರ್ಮಾಣ ಮತ್ತೆ ಜೀವಕಳೆ ಪಡೆಯುವ ಸಾಧ್ಯತೆ ಗೋಚರಿಸಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗಪಡೆಯುತ್ತಿರುವಂತೆ ಹೆದ್ದಾರಿಗೆ ತಾಗಿಕೊಂಡಿರುವ ಕುಂಬಳೆಯ ಸಮಗ್ರ ಅಅಭಿವೃದ್ದಿಯನ್ನು ಮನಗಂಡು ವಿವಿಧ ಆಯಾಮಗಳ ಅಭಿವೃದ್ದಿಯ ಭಾಗವಾಗಿ ಮೊದಲಹಂತದಲ್ಲಿ ಬಸ್ ನಿಲ್ದಾಣ ಹಾಗೂ ವ್ಯಾಪಾರ ಸಂಕೀರ್ಣ ರಚಿಸುವ ಪ್ರಥಮ ಹಂತವಾಗಿ ಮಣ್ಣು ಪರೀಕ್ಷೆಗೆ ಚಾಲನೆ ನೀಡಲಾಗಿದೆ.
ಐತಿಹಾಸಿಕವಾಗಿ ಮಹತ್ವಿಕೆಯಿರುವ ಕುಂಬಳೆ ಪೇಟೆ ಹೆಚ್ಚು ಜನನಿಬಿಡತೆಯ ಕೇಂದ್ರವಾಗಿದೆ. ಹಳೆಯ ಬಸ್ ನಿಲ್ದಾಣ ಕಟ್ಟಡವನ್ನು ಕೆಡವಿ ವರ್ಷಗಳು ಹಲವು ಸಂದಿದ್ದರೂ ನೂತನ ಬಸ್ ನಿಲ್ದಾಣ ನಿರ್ಮಾಣ ಈವರೆಗೂ ಸಾಕಾರಗೊಂಡಿಲ್ಲ. ಹಲವು ಕಾರಣಗಳಿಂದ ಹೊಸ ವ್ಯವಸ್ಥೆಗಳಿಲ್ಲದೆ ಜನಸಾಮಾನ್ಯರು ಬಿಸಿಲು-ಮಳೆಗಳಿಂದ ತಂಗಲು ಹರಸಾಹಸಪಡಬೇಕಾದ ಸ್ಥಿತಿ ಹತಾಶೆಗೂ ಕಾರಣವಾಗಿದೆ.
ಈ ಮಧ್ಯೆ ಪೊವ್ವಲ್ ನ ಎಲ್.ಬಿ.ಎಸ್.ಇಂಜಿನಿಯರಿಂಗ್ ಕಾಲೇಜು ನೇತೃತ್ವದ ತಜ್ಞರ ತಂಡ ನೂತನ ಬಸ್ ನಿಲ್ದಾಣ-ವ್ಯಾಪಾರ ಸಂಕೀರ್ಣ ನಿರ್ಮಾಣದ ಮೊದಲ ಹಂತವಾಗಿ ಮಣ್ಣು ಪರಿಶೀಲನೆಗೆ ದೌತ್ಯವಹಿಸಿ ಕಾರ್ಯಪ್ರವೃತ್ತವಾಗಿದೆ.
ಇದಕ್ಕೂ ಮೊದಲು ಇಲ್ಲಿ ನೂತನ ಮೂರಂತ್ತಸ್ತಿನ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಒಂದು ಅಂತಸ್ತಿನ ಕಟ್ಟಡ ನಿರ್ಮಿಸಲೂ ಯಾವ ವೈಜ್ಞಾನಿಕ ಪರಿಶೋಧನೆಗಳಿಲ್ಲದ ಅಧಿಕೃತರು ಮೂರಂತಸ್ತಿನ ಕಟ್ಟಡ ನಿರ್ಮಿಸಲು ಹೊರಟಿದ್ದರೆಂಬ ವರದಿಯ ಅನುಸಾರ ಆ ಯೋಜನೆ ನೆಲಕಚ್ಚಿತು ಎನ್ನಲಾಗಿದೆ. ಸ್ಥಳೀಯ ಗ್ರಾ.ಪಂ. ಸುಪರ್ಧಿಯಲ್ಲಿ ಇಲ್ಲಿ ನಿಲ್ದಾಣ-ಕಟ್ಟಡಗಳನ್ನು ನಿರ್ಮಿಸಲು ಎಷ್ಟು ವ್ಯಾಪ್ತಿಯ ಭೂ ಲಭ್ಯತೆ ಇದೆ, ಎಷ್ಟು ವ್ಯಾಪಾರಿ ಕೊಠಡಿ ನಿರ್ಮಿಸಬಹುದು, ಎಷ್ಟು ಬಾಡಿಗೆ ವಿಧಿಸಬಹುದು ಇಂಬಿತ್ಯಾದಿ ಮಾಹಿತಿಗಳಿಲ್ಲದ ಪೂರ್ವ ಯೋಜನೆಗಳಾದ್ದರಿಂದ ಆ ಯೋಜನೆ ಮುಂದುವರಿದಿಲ್ಲ. ಗ್ರಾ.ಪಂ. ಬಸ್ ನಿಲ್ದಾಣ-ವ್ಯಾಪಾರ ಸಂಕೀರ್ಣ ನಿರ್ಮಾಣಕ್ಕೆ ಈಗಾಗಲೇ ಎರಡು ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.
ಪ್ರಸ್ತುತ ರಾಜ್ಯ ನಿರ್ಮಾಣ ಕಾಮಗಾರಿ ಕಾಯ್ದೆಯನ್ವಯ ಯಾವುದೇ ಕಟ್ಟಡ ನಿರ್ಮಾಣದ ಮೊದಲು ಕಟ್ಟಡ ಒಳಗೊಳ್ಳುವ ಪ್ರದೇಶ ಸಹಿತ ಪರಿಸರ ಪ್ರದೇಶಗಳ ಮಣ್ಣು ಪರೀಕ್ಷೆ ಕಡ್ಡಾಯವಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ನಡೆಸುವ ಮಣ್ಣು ಪರೀಕ್ಷೆಯ ಮೂಲಕ ಕಟ್ಟಡದ ಯೋಜನೆಗೆ ಮಾನದಂಡ ರಚಿಸಲಾಗುತ್ತದೆ. ಮಣ್ಣು ಪರಿಶೀಲನೆಗೆ ಪ್ರಸ್ತುತ ಎರಡು ಲಕ್ಷ ರೂ.ಗಳನ್ನು ನೀಡಲಾಗಿದೆ.
ಅಂತೂ ರಾ.ಹೆದ್ದಾರಿಯ ಕಾರಣದಿಂದಲಾದರೂ ಕುಂಬಳೆಯಲ್ಲಿ ಶೀಘ್ರ ಬಸ್ ನಿಲ್ದಾಣ-ವ್ಯಾಪಾರ ಸಂಕೀರ್ಣ ನಿರ್ಮಾಣ ಸಾಕಾರಗೊಳ್ಳುವ ನಿರೀಕ್ಷೆ ಮೂಡಿಬಂದಿದೆ.