ಬದಿಯಡ್ಕ: ಪೂರ್ವಜರು ಹಾಕಿಕೊಟ್ಟ ಸಂಸ್ಕಾರ ಆಚಾರ ವಿಚಾರಗಳನ್ನು ಇಂದಿನ ಜನರು ತಿಳಿಯಬೇಕಾಗಿದೆ. ಪರಿಸರದ ಧಾರ್ಮಿಕ ಕ್ಷೇತ್ರಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯ ಎಂಬುದನ್ನು ನಾವೆಲ್ಲ ಅರಿತಿರಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು ಒಟ್ಟಾಗಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನವನ್ನು ನೀಡಿದರು.
ಶುಕ್ರವಾರ ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿ ದಾರಂದ ಮುಹೂರ್ತ ನೆರವೇರಿಸಿ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮೊಳಗೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿ ಪರಕೀಯರು ನಮ್ಮ ಮೇಲೆ ಬಹಳಷ್ಟು ಆಕ್ರಮಣಗಳನ್ನು ಮಾಡಿ ನಮ್ಮ ಧಾರ್ಮಿಕ ಕ್ಷೇತ್ರಗಳನ್ನು ಅವರ ವಶಗೊಳಿಸಿದರು. ಇನ್ನು ಆ ರೀತಿ ಆಗದಂತೆ ನಾವು ಎಚ್ಚರವಹಿಸಬೇಕು. ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಬಹಳಷ್ಟು ಇತಿಹಾಸವಿರುವ ಕ್ಷೇತ್ರ ಇದಾಗಿದೆ. ಪಂಚಾಕ್ಷರೀ ಮಂತ್ರಜಪ ಇಲ್ಲಿ ನಿರಂತರ ನಡೆಯಬೇಕು. ಪಂಚಾಕ್ಷರೀ ಮಂತ್ರ ಜಪಕ್ಕೆ ಸಕಲ ಅಭೀಷ್ಟಗಳನ್ನು ಈಡೇರಿಸುವ ಶಕ್ತಿಯಿದೆ. ಮುಂದಿನ ದಿನಗಳಲ್ಲಿ ಬಂದೊದಗಲಿರುವ ವಿಪತ್ತುಗಳ ರಕ್ಷಣೆಯೂ ಇದರಿಂದ ಸಾಧ್ಯವಿದೆ ಎಂದರು.
ಆಡಳಿತ ಮೊಕ್ತೇಸರ ಶಂಕರನಾರಾಯಣ ಪುಣ್ಯಂಚಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ನೀರ್ಮಜೆ ವಾಮದೇವ ಪುಣಿಂಚಿತ್ತಾಯ, ವಿಜಯನ್ ನಾಯರ್, ಗೋಪಾಲ, ರವಿಶಂಕರ ಪುಣಿಂಚಿತ್ತಾಯ, ಬಾಲಸುಬ್ರಹ್ಮಣ್ಯ ಪುಣಿಂಚಿತ್ತಾಯ ವಾಲ್ತಾಜೆ, ರಾಮಚಂದ್ರ ಪುಣಿಂಚಿತ್ತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೀತಾರಾಮ ರಾವ್ ಪಿಲಿಕೂಡ್ಲು ಸ್ವಾಗತಿಸಿ, ಸುನಿಲ್ ಪಿ.ಆರ್. ಕರೋಡಿ ವಂದಿಸಿದರು. ಮಹಿಳಾ ಸಮಿತಿಯ ಅಧ್ಯಕ್ಷೆ ಸೀತಾರತ್ನ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು. ವಿವಿಧ ಸಮಿತಿಗಳ ಪದಾಧಿಕಾರಿಗಳು, ಕ್ಷೇತ್ರದ ಭಕ್ತಾದಿಗಳು ಪಾಲ್ಗೊಂಡಿದ್ದರು.