ಕಾಸರಗೋಡು: ಸಾಮಾಜಿಕ ಅಸಮತೋಲನ, ವೈರುಧ್ಯಗಳ ವಿರುದ್ಧ ಕಲಾವಿದರನ್ನು ಸಂಘಟಿಸಿ ಸವಾಕ್ ನಡೆಸುತ್ತಿರುವ ಹೋರಾಟಗಳು ಅನುಕರಣೀಯವಾಗಿದ್ದು, ಸಮಾಜದ ಒಳಿತಿಗಾಗಿ ಶ್ರಮಿಸುವ ಕಲಾವಿದರಿಗೆ ಪರಿಹಾರ ನೀಡುವ ಪಿಂಚಣಿ ಯೋಜನೆ ಹೆಚ್ಚಿಸಲು ಸÀರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಉದುಮ ಶಾಸಕ ಸಿ.ಎಚ್. ಕುಂಞಂಬು ಅಭಿಪ್ರಾಯಪಟ್ಟರು.
ಕಲಾವಿದರ ಸಂಘಟನೆಯಾದ ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಕೇರಳ(ಸವಾಕ್) ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಪಳ್ಳಿಕ್ಕೆರೆ ಬೀಚ್ ಸಭಾಂಗಣದಲ್ಲಿ ಭಾನುವಾರ ನಡೆದ ಸವಾಕ್ ಕುಟುಂಬ ಸಂಗಮ ಉದ್ಘಾಟಿಸಿ ಅವರು ಮಾತನಾಡಿದರು.
ಸಕಲ ಕಲೆಗಳನ್ನು ಸಮನ್ವಯಗೊಳಿಸುವ ಸವಾಕ್ ಸಂಸ್ಥೆಯ ಕಾರ್ಯಚಟುವಟಿಕೆ ಬಗ್ಗೆ ಮಾಜಿ ಶಾಸಕ ಹಾಗೂ ಜಾನಪದ ಅಕಾಡೆಮಿ ಸದಸ್ಯ ಕೆ.ವಿ. ಕುಂಞ ರಾಮನ್ ಮೆಚ್ಚುಗೆ ವ್ಯಕ್ತಪಡಿಸಿದರು. ಸವಾಕ್ ಜಿಲ್ಲಾ ಕಲಾ ಉತ್ಸವದಲ್ಲಿ ವಿಜೇತರಾದ ಕಲಾವಿದರಿಗೆ ಬಹುಮಾನ ವಿತರಿಸಲಾಯಿತು.
ಸವಾಕ್ ರಾಜ್ಯ ಕಾರ್ಯದರ್ಶಿ ಸುದರ್ಶನನ್ ವರ್ಣಂ ಮಾತನಾಡಿ, ಅನಾದಿ ಕಾಲದಿಂದಲೂ ಸಾಮಾಜಿಕ ಪ್ರಗತಿಗಾಗಿ ಶ್ರಮಿಸುತ್ತಿರುವ ಕಲಾವಿದರಿಗೆ ಹೆಚ್ಚು ಹೆಚ್ಚು ಸವಲತ್ತು ಕಲ್ಪಿಸಿ, ಅವರ ಸಮಸ್ಯೆಗಳ ಅಧ್ಯಯನಕ್ಕೆ ಸರ್ಕಾರ ಮುಂದಾಗಬೇಕು ಎಂದರು.
ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ ಮಾತನಾಡಿ, ನೆರೆಯ ಕರ್ನಾಟಕ ರಾಜ್ಯದಲ್ಲೂ ಸವಾಕ್ ಕಾರ್ಯ ಆರಂಭಿಸಲಿದೆ. ಈ ನಿಟ್ಟಿನಲ್ಲಿ ಕೇರಳದ ಅಗತ್ಯ ಸಲಹೆ, ಸೂಚನೆಗಳು ಲಭಿಸಬೇಕು.ಅಲ್ಲದೆ ಈ ಬಗೆಗಿನ ಅಧ್ಯಯನ ಈಗಾಗಲೇ ಆರಂಭವಾಗಿದೆ ಎಂದರು.
ಸವಾಕ್ ರಾಜ್ಯ ಕೋಶಾಧಿಕಾರಿ ಹಾಗೂ ಜಿಲ್ಲಾಧ್ಯಕ್ಷ ಉಮೇಶ್ ಎಂ ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಪಂಚಾಯತಿ ಅಧ್ಯಕ್ಷೆ ಜೀನ್ ಲೆವಿನೋ ಮೊಂತೆರೊ, ಟಿ.ವಿ. ಗಂಗಾಧರನ್, ದಿವಾಕರ ಅಶೋಕನಗರ, ಅಪ್ಪುಕುಂಞÂ ಮಣಿಯಾಣಿ, ರವೀಂದ್ರನ್ ನಾಯರ್, ದಯಾ ಪ್ರಸಾದ್, ಭಾರತಿ ಬಾಬು, ಜಯಂತಿ ಸುವರ್ಣ, ನರಸಿಂಹ ಬಲ್ಲಾಳ್ ಮತ್ತಿತರರು ಮಾತನಾಡಿದರು.
ಜಿಲ್ಲಾ ಕಾರ್ಯದರ್ಶಿ ಸನ್ನಿ ಆಗಸ್ಟಿನ್ ಸ್ವಾಗತಿಸಿ, ಚಂದ್ರಹಾಸ ಕಯ್ಯಾರ್ ವಂದಿಸಿದರು.