ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ 7ನೇ ವಾರ್ಡಿನ ಕುಟುಂಬಶ್ರೀ ಘಟಕಗಳ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ವಾಣಿನಗರದ ಪಡ್ರೆ ಸರ್ಕಾರಿ ಶಾಲಾ ಸಭಾಂಗಣದಲ್ಲಿ ಜರಗಿತು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿ ಮಾತನಾಡಿ, ಕುಟುಂಬಶ್ರೀ ಮೂಲಕ ಸ್ತ್ರೀ ಸಬಲೀಕರಣ ಮಾತ್ರವಲ್ಲದೆ ಆರ್ಥಿಕ ಸಂಪನ್ಮೂಲ, ಉದ್ಯೋಗ ಇನ್ನಿತರ ಚಟುವಟಿಕೆಗೆಗೂ ಸಾಧ್ಯವಾಗುತ್ತಿದ್ದು ಕುಟುಂಬಶ್ರೀ ಕೇವಲ ಸಾಲದ ವ್ಯವಹಾರಗಳಿಗೆ ಮಾತ್ರವಲ್ಲ. ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವುದರಿಂದ ಸಾಮೂಹಿಕ ಪ್ರಗತಿಗೂ ಮಾದರಿಯಾಗುತ್ತದೆ ಎಂದರು.
ಗ್ರಾ.ಪಂ. ಸದಸ್ಯ ಎಸ್.ಬಿ.ನರಸಿಂಹ ಪೂಜಾರಿ ಸಭೆಯ ಅಧ್ಯಕ್ಷತೆವಹಿಸಿದ್ದರು. ಪಡ್ರೆ ಸರ್ಕಾರಿ ಶಾಲಾ ಶಿಕ್ಷಕ ಬಟ್ಯಪ್ಪ ಮಾಸ್ತರ್, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಗ್ರಾ.ಪಂ.ಮಾಜಿ ಸದಸ್ಯ ರವಿ ವಾಣಿನಗರ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಾಟಿವೈದ್ಯ, ಕುಟುಂಬಶ್ರೀ ಸದಸ್ಯೆ ನಳಿನಾಕ್ಷಿ ರೈ ಕುಂಭತ್ತೊಟ್ಟಿ ಹಾಗೂ ಸುಶೀಲ ಕುತ್ತಾಜೆ ಅವರನ್ನು ಸನ್ಮಾನಿಸಲಾಯಿತು. ಸವಿತಾ ಟೀಚರ್ ಸನ್ಮಾನಿತರ ಪರಿಚಯ ವಾಚನಗೈದರು. ಎಡಿಎಸ್ ಕಾರ್ಯದರ್ಶಿ ಇಂದಿರಾ ಕೆ.ವರದಿ ಮಂಡಿಸಿದರು. ರೇವತಿ ಕೆ ಪ್ರಾರ್ಥನೆಗೈದು ಸ್ವಾಗತಿಸಿದರು. ಕಮಲಾಕ್ಷಿ ವಂದಿಸಿದರು. ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕುಟುಂಬಶ್ರೀ ಸದಸ್ಯೆಯರಿಗಾಗಿ ವಿವಿಧ ಸ್ಪರ್ಧೆಗಳು ಜರಗಿತು.