ಕಣ್ಣೂರು: ಆಸ್ಪತ್ರೆಗೆ ಹೋಗುವಾಗ ಇದ್ದಕ್ಕಿದ್ದಂತೆ ಕಾರು ಹೊತ್ತಿ ಉರಿದು ಗಂಡ ಮತ್ತು ಗರ್ಭಿಣಿ ಪತ್ನಿ ಸಜೀವ ದಹನವಾದ ಘಟನೆ ಕೇರಳದ ಕಣ್ಣೂರಿನಲ್ಲಿ ಮೊನ್ನೆ (ಫೆ.2) ನಡೆದಿದ್ದು, ಈ ಅವಘಡಕ್ಕೆ ಕಾರಣ ಏನೆಂಬುದೇ ಕೇರಳ ಸಾರಿಗೆ ಇಲಾಖೆಗೆ ಬಹುದೊಡ್ಡ ಪ್ರಶ್ನೆಯಾಗಿ ಕಾಡತೊಡಗಿದೆ.
ಫೆ.2ರಂದು ಬೆಳಗ್ಗೆ ಕಣ್ಣೂರು ಮೂಲದ ರೀಶಾ (26) ಮತ್ತು ಪತಿ ಪ್ರಿಜಿತ್ (35) ಇಬ್ಬರು ಆಸ್ಪತ್ರೆಗೆ ತೆರಳುತ್ತಿದ್ದರು. ಗರ್ಭಿಣಿ ರೀಶಾಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. 2020 ಮಾರುತಿ ಎಸ್- ಪ್ರೆಸ್ಸೋ ಕಾರಿನಲ್ಲಿ ಒಟ್ಟು 6 ಮಂದಿ ತೆರಳುತ್ತಿದ್ದರು. ಒಂದು ಮಗು ಸೇರಿದಂತೆ ನಾಲ್ವರು ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಕಾರಿನಲ್ಲಿ ಇದ್ದಕ್ಕಿದಂತೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಹಿಂದೆ ಕುಳಿತ್ತಿದ್ದವರು ಎಸ್ಕೇಪ್ ಆದರು. ಆದರೆ, ಮುಂದೆ ಕುಳಿತಿದ್ದ ದಂಪತಿಯ ಕೈಯಿಂದ ಕಾರಿನ ಬಾಗಿಲು ಸಾಧ್ಯವಾಗದೇ ಅಲ್ಲಿಯೇ ಸಿಲುಕಿದರು.
ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ರೀಶಾ ಮತ್ತು ಪ್ರಿಜಿತ್ ಮೃತಪಟ್ಟಿದ್ದರು. ಸ್ಥಳದಲ್ಲಿದ್ದ ಜನರು ಇಬ್ಬರನ್ನು ಕಾಪಾಡಲು ಯತ್ನಿಸಿದಾದರೂ ಅದು ಸಾಧ್ಯವಾಗಲಿಲ್ಲ.
ಇದೀಗ ಈ ಘಟನೆಗೆ ಕಾರಣ ಏನು ಎಂಬುದೇ ಕೇರಳ ಸಾರಿಗೆ ಇಲಾಖೆಗೆ ಭಾರೀ ಸವಾಲಾಗಿದೆ. ಮೋಟಾರು ವಾಹನ ಇಲಾಖೆ, ವಿಧಿವಿಜ್ಞಾನ ವಿಭಾಗ ಹಾಗೂ ಪೊಲೀಸರು ನಡೆಸಿದ ತಪಾಸಣೆಯಲ್ಲಿ ವಾಹನದ ಇಂಧನ ಲೈನ್ನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ. ಹಾಗಾದರೆ, ಈ ಅವಘಡ ಹೇಗೆ ಸಂಭವಿಸಿತು? ಇದಕ್ಕೆ ಉತ್ತರ ಹುಡುಕುವ ಪ್ರಯತ್ನ ನಡೆಯುತ್ತಲೇ ಇದೆ.
ಬಹುಶಃ ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿರಬಹುದೆಂದು ಒಂದು ತಂಡ ಅಂದಾಜಿಸಿದೆ. ಆದಾಗ್ಯೂ, ಕಾರಿನಲ್ಲಿದ್ದ ಕೆಲವು ವಸ್ತುಗಳಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸಾರಿಗೆ ಇಲಾಖೆ ಅಧಿಕಾರಿ ಪಿವಿ ಬಿಜು ಊಹಿಸಿದ್ದಾರೆ.
ಕಾರನ್ನು ಪರಿಶೀಲಿಸಿದಾಗ ಎರಡು ಪ್ಲಾಸ್ಟಿಕ್ ಬಾಟಲ್ಗಳು ಪತ್ತೆಯಾಗಿದ್ದು, ಬಾಟಲ್ಗಳಲ್ಲಿ ಏನಾದರೂ ದ್ರವ ಇತ್ತೇ ಎಂಬುದನ್ನು ತಿಳಿಯಲು ಅವುಗಳನ್ನು ಕೆಮಿಕಲ್ ಟೆಸ್ಟ್ಗೆ ಕಳುಹಿಸಲಾಗಿದೆ. ಈ ಮಧ್ಯೆ ಮೃತ ರೀಶಾಳ ತಂದೆ ವಿಶ್ವನಾಥನ್ ಅವರು ಕಾರಿನಲ್ಲಿ ಎರಡು ಬಾಟಲ್ಗಳಲ್ಲಿ ಇಟ್ಟಿದ್ದ ದ್ರವದಿಂದ ಅಪಘಾತ ಸಂಭವಿಸಿದೆ ಎಂಬ ವದಂತಿಯನ್ನು ಅಲ್ಲಗಳೆದಿದ್ದಾರೆ.