ಕಾಸರಗೋಡು: ಕಾಞಂಗಾಡಿನ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ನಕಲಿ ಚಿನ್ನ ಅಡವಿರಿಸಿ ಮೂರು ಲಕ್ಷ ರೂ. ಪಡೆದು ವಂಚಿಸಿದ ಯೂತ್ ಕಾಂಗ್ರೆಸ್ ಮಲಪ್ಪುರಂ ಜಿಲ್ಲಾ ಕಾರ್ಯದರ್ಶಿ ಸುಧೀಶ್ ಪೂಕಾಟ್ಟಿರಿ(40)ಎಂಬಾತನನ್ನು ಹೊಸದುರ್ಗ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸುಧೀಶ್ ಬಗ್ಗೆ ನೀಡಿದ ಮಾಹಿತಿಯನ್ವಯ ಈತನನ್ನು ಬಂಧಿಸಲಾಗಿದೆ. ಕಾಞಂಗಾಡು ಸೌತ್ ನಿವಾಸಿ ಅನಿಲ್ ಕುಮಾರ್, ರಾಜಾಪುರಂ ಕಳ್ಳಾರ್ ನಿವಾಸಿ ಶರ್ಫುದ್ದೀನ್ ಎಂಬವರು 2022 ನವೆಂಬರ್ 2 ಹಾಗೂ 11ರಂದು ಕಾಞಂಗಾಡಿನ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಚಿನ್ನ ಅಡವಿರಿಸಿದ್ದರು. ಅನಿಲ್ ಕುಮಾರ್ 48.5ಗ್ರಾಂ ಚಿನ್ನ ಅಡವಿರಿಸಿ 1.60ಲಕ್ಷ ರೂ. ಹಣ ಪಡೆದಿದ್ದರೆ, ಶರ್ಫುದ್ದೀನ್ 40.8ಗ್ರಾಂ ಚಿನ್ನ ಅಡವಿರಿಸಿ 1.40ಲಕ್ಷ ರೂ. ಪಡೆದಿದ್ದರು. ಈ ಚಿನ್ನದ ಬಗ್ಗೆ ಸಂಸ್ಥೆ ಅಧಿಕಾರಿಗಳಿಗೆ ಸಂಶಯಗೊಂಡು ಹೆಚ್ಚಿನ ತಪಾಸಣೆ ನಡೆಸಿದಾಗ ಇದು ನಕಲಿ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಕೇಸು ದಾಖಲಿಸಿ ಅನಿಲ್ಕುಮಾರ್ ಮತ್ತು ಶರ್ಫುದ್ದೀನ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈ ನಕಲಿ ಚಿನ್ನ ಸುಧೀಶ್ ನೀಡಿರುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಲಪ್ಪುರಮ ಇಡಯೂರ್ಗೆ ತೆರಳಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ನಕಲಿ ಚಿನ್ನ ಅಡವಿರಿಸಿ ಹಣಪಡೆದು ವಂಚನೆ-ಯುತ್ ಕಾಂಗ್ರೆಸ್ ಮುಖಂಡನ ಬಂಧನ
0
ಫೆಬ್ರವರಿ 01, 2023




