ಪಣಜಿ: ಶಿಸ್ತು ಮೂಡಿಸುವ ಸಲುವಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಶಿಕ್ಷೆ ನೀಡುವುದು ಅಪರಾಧವಲ್ಲ ಎಂದು ಬಾಂಬೆ ಹೈಕೋರ್ಟ್'ನ ಗೋವಾ ಪೀಠ ಅಭಿಪ್ರಾಯಪಟ್ಟಿದೆ.
ವಿದ್ಯಾರ್ಥಿಗಳು ಕೇವಲ ಬೋಧನಾ ಕಲಿಕೆಯ ಉದ್ಧೇಶಕ್ಕಾಗಿ ಮಾತ್ರ ಶಾಲೆಗೆ ಸೇರುವುದಲ್ಲ.
ಜೀವನ ಮೌಲ್ಯಗಳು ಸೇರಿದಂತೆ ಇತರೆ ಅಂಶಗಳನ್ನು ಕಲಿಯಲಿ ಎಂದು ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಶೈಕ್ಷಣಿಕ ವಿಷಯಗಳನ್ನು ಕಲಿಸುವುದರ ಜತೆಗೆ ವಿದ್ಯಾರ್ಥಿಗಳನ್ನು ಮಾದರಿ ಪ್ರಜೆಯಾಗಿ ರೂಪುಗೊಳಿಸುವುದರಲ್ಲಿ ಶಾಲೆ ಹಾಗೂ ಶಿಕ್ಷಕರ ಪಾತ್ರ ಮುಖ್ಯವಾಗಿರುತ್ತದೆ ಎಂದು ನ್ಯಾಯಮೂರ್ತಿ ಭರತ್ ದೇಶಪಾಂಡೆ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
2014ರಲ್ಲಿ ಗೋವಾದ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಇನ್ನೊಬ್ಬ ವಿದ್ಯಾರ್ಥಿನಿಯ ಬಾಟಲಿಯಿಂದ ನೀರು ಕುಡಿದಿದ್ದಳು. ಈ ಬಗ್ಗೆ ಆಕೆಯ ಸಹೋದರಿ ಮತ್ತೊಂದು ತರಗತಿಯಿಂದ ಬಂದು ವಿಚಾರಿಸಿದ್ದಳು. ಈ ವೇಳೆ ಶಿಕ್ಷಕ ಆಕೆಗೆ ಹೊಡೆದಿದ್ದ. ಈ ಬಗ್ಗೆ ಪೊಲೀಸ್ ದೂರು ನೀಡಲಾಗಿತ್ತು. ಪ್ರಕರಣ ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಿತ್ತು.
ಇದೀಗ ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್'ನ ಗೋವಾ ಪೀಠ, ಪ್ರಾಥಮಿಕ ಶಾಲೆಯಲ್ಲಿ ಇಂತಹ ಘಟನೆಗಳು ನಡೆಯುವುದು ತೀರಾ ಸಾಮಾನ್ಯ. ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಶಿಕ್ಷಕರು ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಇದಕ್ಕಾಗಿ ಕೆಲವೊಮ್ಮೆ ಕಠೋರವಾಗಿ ವರ್ತಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿ ನ್ಯಾಯಮೂರ್ತಿ ಭರತ್ ದೇಶಪಾಂಡೆ ಅವರನ್ನು ಒಳಗೊಂಡ ಹೈಕೋರ್ಟ್ ಏಕಸದಸ್ಯ ಪೀಠ ಹೇಳಿದೆ.
ಶಿಕ್ಷಕನಾದವನು ತನ್ನ ತರಗತಿಯಲ್ಲಿ ಶಿಸ್ತು ಕಾಪಾಡಿಕೊಳ್ಳಲು ಬದ್ಧನಾಗಿರುತ್ತಾನೆ. ಶಿಕ್ಷಕರ ಸೂಚನೆಯನ್ನು ವಿದ್ಯಾರ್ಥಿಗಳು ಪಾಲಿಸದೆ ತಪ್ಪುಗಳನ್ನು ಪುನರಾವರ್ತಿಸುತ್ತಿದ್ದರೆ ದಂಡಿಸುವುದು ತಪ್ಪಲ್ಲ ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಇದೀಗ ಶಿಕ್ಷಕನಿಗೆ ವಿಧಿಸಲಾಗಿದ್ದ ಒಂದು ದಿನದ ಜೈಲು ಹಾಗೂ ಒಂದ ಲಕ್ಷ ರೂಪಾಯಿ ದಂಡವನ್ನು ನ್ಯಾಯಾಲಯ ರದ್ದುಗೊಳಿಸಿದೆ.