HEALTH TIPS

ಎಂಸಿಡಿ: ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಹೊಡೆದಾಟ

 

             ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) ಆರು ಸದಸ್ಯರ ಸ್ಥಾಯಿ ಸಮಿತಿ ಆಯ್ಕೆಯ ಚುನಾವಣೆಗೆ ಶುಕ್ರವಾರ ಆಡಳಿತ ಪಕ್ಷ ಎಎಪಿ ಮತ್ತು ವಿರೋಧ ಪಕ್ಷ ಬಿಜೆಪಿ ಸದಸ್ಯರ ನಡುವೆ ಭಾರಿ ಹೊಡೆದಾಟ, ನೂಕಾಟ, ಗದ್ದಲದ ನಡುವೆ ಮತದಾನ ನಡೆಯಿತು.

                ಆರು ಸದಸ್ಯರ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಒಂದು ಮತವನ್ನು ಅಮಾನ್ಯವೆಂದು ಮೇಯರ್‌ ಶೆಲ್ಲಿ ಒಬೆರಾಯ್ ಘೋಷಿಸಿದ ನಂತರ, ಸಭೆಯಲ್ಲಿ ಗಲಾಟೆ ಶುರುವಾಯಿತು.

ಬಿಜೆಪಿ ಸದಸ್ಯರು ಮೇಜಿನ ಮೇಲೆ ಹತ್ತಿ ಘೋಷಣೆಗಳನ್ನು ಕೂಗಿದರು.

      ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಿ, ಎರಡೂ ಪಕ್ಷಗಳ ಸದಸ್ಯರು ಪರಸ್ಪರ ಕೂಗಾಟ, ತಳ್ಳಾಟ, ಕಪಾಳ ಮೋಕ್ಷ, ಕೈ ಕೈ ಮಿಲಾವಣೆ ನಡೆಸಿದರು. ಒಬ್ಬರನ್ನೊಬ್ಬರು ನೆಲಕ್ಕೆ ಕಡೆವಿಕೊಂಡು ಒದ್ದರು. ಕೆಲ ಸದಸ್ಯರು ಕುಸಿದು ಬಿದ್ದರು. ಕೆಲ ಸದಸ್ಯರ ಬಟ್ಟೆಗಳು ಹರಿದು ಹೋದವು. ಇಡೀ ಸಭೆ ಕ್ಷಣಾರ್ಧದಲ್ಲಿ ಸಮರಾಂಗಣವಾಗಿ ಮಾರ್ಪಟ್ಟಿತು.

                    ಬಿಜೆಪಿ ಸದಸ್ಯರು, ಮತ ಎಣಿಕೆಗೆ ಅಡ್ಡಿಪಡಿಸಿದರು. ಅಮಾನ್ಯ ಮತ ಪರಿಗಣಿಸದೇ, ಫಲಿತಾಂಶ ಘೋಷಿಸು ವುದಾಗಿ ಪ್ರಕಟಿಸಿದ ಮೇಯರ್, 250 ಸದಸ್ಯರ ಪೈಕಿ 242 ಸದಸ್ಯರು ಮತದಾನ ಮಾಡಿದರು. ಎಂಟು ಮಂದಿ ಸದಸ್ಯರು ಮತದಾನ ಮಾಡಿಲ್ಲ ಎಂದರು.

                ಸದಸ್ಯರಾದ ಮಂದೀಪ್ ಸಿಂಗ್‌, ಅರಿಬಾ ಖಾನ್, ನಾಜಿಯಾ ಡ್ಯಾನಿಶ್, ಸಮೀರ್ ಅಹಮ್ಮದ್, ಶಗುಫ್ತಾ ಚೌಧರಿ ಜುಬೇರ್, ಸಬಿಲಾ ಬೇಗಂ, ನಾಜಿಯಾ ಖಾತೂನ್ ಮತ್ತು ಜರೀಫ್ ಅವರು ಮತದಾನ ಮಾಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

                    'ಮತ ಮಾನ್ಯವಾಗಿದೆ. ಅದು ಅಮಾನ್ಯವಾಗಿದ್ದರೆ, ನಮ್ಮ ಲೆಕ್ಕಾಚಾರದ ಪ್ರಕಾರ, ಎಎಪಿಯ ಅಭ್ಯರ್ಥಿ ಗೆಲ್ಲು ತ್ತಾರೆ' ಎಂದು ಅಂಗಿಯ ಗುಂಡಿ ತೆರೆದಿದ್ದ, ಬಿಜೆಪಿಯ ಕೌನ್ಸಿಲರ್ ಒಬ್ಬರು ಹೇಳಿದರೆ, ಮತ್ತೊಬ್ಬ ಬಿಜೆಪಿಯ ಸದ ಸ್ಯರು, ಚುನಾವಣಾ ಆಯೋಗವು ನಿಗದಿ ಪಡಿಸಿದಂತೆ ಮತ ಎಣಿಕೆ ನಡೆಯಲಿಲ್ಲ. ಮೇಯರ್‌ ನಿಯಮ ಉಲ್ಲಂಘಿಸಿದರು' ಎಂದು ಆರೋಪಿಸಿರುವುದಾಗಿ ಎಂದು ಎನ್‌ಡಿಟಿವಿ ವರದಿ ಮಾಡಿದೆ.

                  ಎಂಸಿಡಿ ಸಭೆಯನ್ನು ನಂತರ ಮುಂದೂಡಲಾಯಿತು. ಸೋಮವಾರ ಮತ್ತೆ ಸಭೆ ಸೇರಲಿದೆ. ಆರು ಸ್ಥಾನಗಳಿಗೆ ಏಳು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮರು ಎಣಿಕೆಗೆ ಅನುಮತಿ ನೀಡುವುದಿಲ್ಲವೆಂದು ಬಿಜೆಪಿ ಸದಸ್ಯರು ಹೇಳಿದ್ದಾರೆ.

                     'ಎಂಸಿಡಿ ಸಭೆಯಲ್ಲಿನ ಈ ಬೆಳವಣಿಗೆ ಬಿಜೆಪಿ ಗೂಂಡಾಗಳ ಪಕ್ಷವೆನ್ನುವುದನ್ನು ದೇಶಕ್ಕೆ ತೋರಿಸಿದೆ. ಮತ ಕಳೆದುಕೊಳ್ಳುತ್ತೇವೆ ಎಂದು ತಿಳಿದಾಗ ಬಿಜೆಪಿಯವರು ಜನರ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿದರು. ದೆಹಲಿ ಮಹಿಳಾ ಮೇಯರ್ ತನ್ನ ಜೀವವನ್ನು ತಾನೇ ರಕ್ಷಿಸಿಕೊಳ್ಳಬೇಕಾಯಿತು. ಬಿಜೆಪಿಯಲ್ಲಿರುವ ಪುರುಷರು ಮೇಜಿನ ಮೇಲೆ ಹತ್ತಿದರು ಮತ್ತು ಮೇಯರ್‌ಗೆ ಬೆದರಿಕೆ ಹಾಕಿದರು' ಎಂದು ಎಎಪಿ ಶಾಸಕ ಅತಿಶಿ ಸುದ್ದಿಗಾರರಿಗೆ ತಿಳಿಸಿದರು.

                 ಹೈಕೋರ್ಟ್‌ ಮೊರೆ: ಎಂಸಿಡಿಯ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗಾಗಿ ಈಚೆಗೆ ನಡೆದಿದ್ದ ಮತದಾನದ ವೇಳೆ ಮೊಬೈಲ್‌ ಮತ್ತು ಪೆನ್ನುಗಳ ಬಳಕೆಗೆ ಅನುಮತಿ ನೀಡುವ ಮೂಲಕ ಮೇಯರ್‌ ಶೆಲ್ಲಿ ಒಬೆರಾಯ್‌ ಅವರು ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯ ಶರದ್‌ ಕಪೂರ್‌ ದೆಹಲಿ ಹೈಕೋರ್ಟ್‌ಗೆ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ.

                                     ಬಿಜೆಪಿ ಸೇರಿದ ಎಎಪಿ ಸದಸ್ಯ

                  ದೆಹಲಿ ಆಮ್‌ ಆದ್ಮಿ ಪಕ್ಷದ (ಎಎಪಿ) ಕಾರ್ಪೊರೇಟರ್‌ ಪವನ್ ಸೆಹ್ರಾವತ್ ಅವರು ಶುಕ್ರವಾರ ಬಿಜೆಪಿ ಸೇರಿದ್ದಾರೆ.

                   ಎಂಸಿಡಿ ಸ್ಥಾಯಿ ಸಮಿತಿಯ 6 ಸದಸ್ಯ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಿತು. ಈ ಮಧ್ಯೆ ಪವನ್‌ ಸೆಹ್ರಾವತ್‌ ಪಕ್ಷ ತೊರೆದಿರುವುದು ಎಎಪಿಗೆ ಮುಜುಗರ ಸೃಷ್ಟಿ ಮಾಡಿದೆ.

                     ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಯಲ್ಲಿ ಭ್ರಷ್ಟಾಚಾರದಿಂದಾಗಿ ಉಸಿರು ಗಟ್ಟುವಿಕೆಯ ವಾತಾವರಣ ಸೃಷ್ಟಿಯಾಗಿದೆ ಎಂದು ಪವನ್‌ ಆರೋಪಿಸಿದ್ದಾರೆ.

                    ಬವಾನಾ ವಾರ್ಡ್‌ನ ಎಎಪಿ ಕಾರ್ಪೊರೇಟರ್‌ ಪವನ್‌ ಅವರನ್ನು ಕಾರ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಮತ್ತು ಪ್ರಧಾನ ಕಾರ್ಯದರ್ಶಿ ಹರ್ಷ್ ಮಲ್ಹೋತ್ರಾ ಅವರು ಬಿಜೆಪಿಗೆ ಬರಮಾಡಿಕೊಂಡರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries