ನವದೆಹಲಿ: 'ಭಾರತದಲ್ಲಿ ಜನಸಾಮಾನ್ಯರು ಭ್ರಷ್ಟಾಚಾರ ಸಮಸ್ಯೆಯಿಂದ ನಲುಗಿ ಹೋಗಿದ್ದು, ಎಲ್ಲಾ ಹಂತಗಳಲ್ಲೂ ಹೊಣೆಗಾರಿಕೆಯನ್ನು ನಿಗದಿಪಡಿಸುವ ಅಗತ್ಯವಿದೆ' ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ.
ಕ್ರಿಮಿನಲ್ ಪ್ರಕರಣಗಳ ಆರೋಪಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ವಕೀಲ ಅಶ್ವಿನ್ ಉಪಾಧ್ಯಾಯ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠವು ಈ ರೀತಿ ತಿಳಿಸಿದೆ.
'ಭಾರತದಲ್ಲಿ ಜನಸಾಮಾನ್ಯರು ಭ್ರಷ್ಟಾಚಾರದಿಂದ ನಲುಗಿದ್ದಾರೆ. ಯಾವುದೇ ಸರ್ಕಾರಿ ಕಚೇರಿಗೆ ಹೋಗಿ, ನೀವು ಅಲ್ಲಿನ ಭ್ರಷ್ಟಾಚಾರದಿಂದ ಪಾರಾಗದೆ ಹೊರಬರಲು ಸಾಧ್ಯವಿಲ್ಲ. ಈ ಬಗ್ಗೆ ಖ್ಯಾತ ನ್ಯಾಯಶಾಸ್ತ್ರಜ್ಞ ನಾನಿ ಪಾಲ್ಖಿವಾಲಾ ಅವರು ತಮ್ಮ 'ವಿ ದಿ ಪೀಪಲ್' ಪುಸ್ತಕದಲ್ಲಿ ಬರೆದಿದ್ದಾರೆ' ಎಂದು ನ್ಯಾಯಪೀಠವು ಉಲ್ಲೇಖಿಸಿತು.
'ಪ್ರಜಾಪ್ರಭುತ್ವದ ಹೆಸರಿನಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಏನನ್ನೂ ಹೇಳದಿರಲು ನಾನು ಬಯಸುತ್ತೇನೆ' ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದರು.
'ಎಲ್ಲಾ ಹಂತಗಳಲ್ಲೂ ಹೊಣೆಗಾರಿಕೆಯನ್ನು ನಿಗದಿಪಡಿಸುವ ಅಗತ್ಯವಿದೆ' ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅಭಿಪ್ರಾಯಪಟ್ಟರು.