ನವದೆಹಲಿ: ಆರೋಗ್ಯ ಕಾರ್ಯಕರ್ತರ ಮೇಲೆ ನಡೆಯುವ ಹಲ್ಲೆಯನ್ನು ತಡೆಯಲು ಸಮಗ್ರ ಕಾನೂನು ತರಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಲೋಕಸಭೆಯಲ್ಲಿ ಆಗ್ರಹಿಸಿದರು.
'ಶೇ 75 ರಷ್ಟು ವೈದ್ಯರು ಒಂದಲ್ಲ ಒಂದು ರೀತಿಯಲ್ಲಿ ದೈಹಿಕ ದಾಳಿ ಎದುರಿಸಿದ್ದಾರೆ.
ಇವುಗಳನ್ನು ನಿಯಂತ್ರಿಸಲು ಸದ್ಯ ಇರುವ ಕಾನೂನುಗಳು ದುರ್ಬಲವಾಗಿದೆ' ಎಂದು ಅವರು ಹೇಳಿದರು.
ಆರೋಗ್ಯ ಕಾರ್ಯಕರ್ತರ ವಿರುದ್ಧ ಹಲ್ಲೆ ತಡೆಯಲು 2019ರಲ್ಲಿ ಕಾನೂನು ತರಲಾಗಿತ್ತು, ಬಳಿಕ ಅದನ್ನು ಹಿಂಪಡೆಯಲಾಗಿತ್ತು. ಈಗ ಕಠಿಣ ಕಾನೂನು ಜಾರಿಗೆ ತರುವ ಅವಶ್ಯಕತೆ ಇದೆ ಎಂದು ಅವರು ಪ್ರತಿಪಾದಿಸಿದರು.
ಬೆಂಗಳೂರು ಹಾಗೂ ಕೋಯಿಕ್ಕೋಡ್ ನಡುವೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳವಾಗಿದ್ದು, ಹೀಗಾಗಿ ಪಾಲಕ್ಕಾಡ್- ಶೊರ್ನೂರ್ ಮಾರ್ಗವಾಗಿ ವಂದೇ ಭಾರತ್ ರೈಲು ಸೇವೆ ಆರಂಭಿಸಬೇಕು ಎಂದು ಕಾಂಗ್ರೆಸ್ ಸದಸ್ಯ ವಿ.ಕೆ ಶ್ರೀಕಂಠನ್ ಆಗ್ರಹಿಸಿದರು.
ಜಾರ್ಖಂಡ್ನ ಗೊಡ್ಡಾದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಜಾರಿಗೆ ತರಬೇಕು ಎಂದು ಬಿಜೆಪಿಯ ಸದಸ್ಯ ನಿಶಿಕಾಂತ್ ದುಬೆ ಆಗ್ರಹಿಸಿದರು. ಈ ಪ್ರದೇಶದಲ್ಲಿ ಸಂತಾಲ್ ಸಮುದಾಯಕ್ಕೆ ಸೇರಿದ ಜನರ ಸಂಖ್ಯೆ ಇಳಿಕೆಯಾಗುತ್ತಿದ್ದು, ಬಾಂಗ್ಲಾದೇಶಿ ವಲಸಿಗರ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಅವರು ಹೇಳಿದರು.