ಮಂಜೇಶ್ವರ : ಆಶಕ್ತರಿಗೆ ಸಹಾಯ ಹಸ್ತ, ಆನಾರೋಗ್ಯ ಪೀಡಿತರಿಗೆ ಚಿಕಿತ್ಸಾ ಸಹಾಯ, ನಿರ್ಗತಿಕರಿಗೆ ಗೃಹೋಪಯೋಗಿ ಸಾಮಾಗ್ರಿ ವಿತರಣೆ ಹೀಗೆ ಸಮಾಜಮುಖಿ ಕಾರ್ಯಗಳಿಂದ ಕಾಸರಗೋಡು ಜಿಲ್ಲೆಯ ಗಡಿನಾಡದ ಮಂಜೇಶ್ವರ ತಾಲೂಕಿನಲ್ಲಿಯೇ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಲ್ಪಟ್ಟಿರುವ ಶ್ರೀರಾಜ ಬೆಳ್ಚಪ್ಪಾಡ ಸೇವಾ ಟ್ರಸ್ಟ್ ಇದೀಗ ಬಡ ಕುಟುಂಬಗಳ ವಧುವರರಿಗೆ ಸಾಮೂಹಿಕ ವಿವಾಹ ಕಾರ್ಯವನ್ನು ಏರ್ಪಡಿಸುವ ಮೂಲಕ ಮತ್ತೊಂದು ಐತಿಹಾಸಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದೆ.
ಸಾಮಾಜಿಕ ಧಾರ್ಮಿಕ ಮುಂದಾಳು ಹಾಗೂ ಹೇರಂಭ ಇಂಡಸ್ಟ್ರೀಸ್ ಮುಂಬೈ ಇದರ ಸ್ಥಾಪಕರಾದ ಉದ್ಯಮಿ,ದಾನಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರ ಸಹಕಾರದಲ್ಲಿ ಚಿಗುರುಪಾದೆ ಶ್ರೀಮಹಾಲಿಂಗೇಶ್ವರ ಕ್ಷೇತ್ರದ ಸಭಾಂಗಣದಲ್ಲಿ ಅತೀ ಬಡ ಕುಟುಂಬದ ಮೂರು ಜತೆ ವಧುವರರಿಗೆ ಸಂಸ್ಥೆಯ ಮಾಂಗಲ್ಯ ನಿಧಿ ಯೋಜನೆಯನ್ವಯ ವಿವಾಹ ನಡೆಸಲಾಯಿತು.ಸದಾಶಿವ ಶೆಟ್ಟಿಯವರ ಮಾತೃಶ್ರೀ ಲೀಲಾವತಿ ಪಕೀರ ಶೆಟ್ಟಿ ಕುಳೂರು ಕನ್ಯಾನ ಹಾಗೂ ಸಹೋದರ ಚಂದ್ರಹಾಸ ಶೆಟ್ಟಿ, ರಾಜ ಬೆಲ್ಚಪ್ಪಾಡ -ಪ್ರೇಮ ದಂಪತಿಗಳು ವಧುವರರನ್ನು ಹರಸಿದರು.
ಶ್ರೀರಾಜ ಬೆಳ್ಚಪ್ಪಾಡ ಸೇವಾ ಟ್ರಸ್ಟ್ ನ ಸ್ಥಾಪಕರಾದ ಯಜ್ಞೇಶ್ ಶಿವತೀರ್ಥಪದವು, ಕಾರ್ಯದರ್ಶಿ ಜಯರಾಜ ಶೆಟ್ಟಿ ಚಾರ್ಲ, ಸಂಜೀವ ಶೆಟ್ಟಿ ಮಾಡ,ಡಾ.ಜಯಪ್ರಕಾಶ್ ತೊಟ್ಟೆತ್ತೋಡಿ ಮೊದಲಾದವರು ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಗೀತ್ ಸಂಗೀತ್ ಉಪ್ಪಳ ಅವರಿಂದ ರಸಮಂಜರಿ ಕಾರ್ಯಕ್ರಮ ಜರಗಿತು.
ರಾಜ ಬೆಳ್ಚಪ್ಪಾಡ ಸೇವಾ ಟ್ರಸ್ಟ್ ನಿಂದ ಚಿಗುರುಪಾದೆಯಲ್ಲಿ ಸಾಮೂಹಿಕ ವಿವಾಹ
0
February 10, 2023
Tags