HEALTH TIPS

'ವಾರಿಸ್ ಪಂಜಾಬ್ ದೆ' ಮುಖ್ಯಸ್ಥನ ಪತ್ತೆಗಾಗಿ ಮುಂದುವರೆದ ಪೊಲೀಸರ ಕಾರ್ಯಾಚರಣೆ; ಯಾರು ಈ ಅಮೃತಪಾಲ್?

 

                ಚಂಡಿಗಡ: ತಲೆಮರೆಸಿಕೊಂಡಿರುವ ಸ್ವಘೋಷಿತ ಮೂಲಭೂತವಾದಿ ಸಿಖ್ ಬೋಧಕ ಹಾಗು 'ವಾರಿಸ್ ಪಂಜಾಬ್ ದೆ' ಮುಖ್ಯಸ್ಥ ಅಮೃತಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರ ಬೇಟೆ ಕಾರ್ಯಾಚರಣೆ ಮೂರನೆಯ ದಿನವಾದ ಸೋಮವಾರವೂ ಮುಂದುವರಿದಿದ್ದು, ಆತನ ಚಿಕ್ಕಪ್ಪ ಹರ್ಜಿತ್ ಸಿಂಗ್ ಮತ್ತು ಇನ್ನೋರ್ವ ವ್ಯಕ್ತಿಯನ್ನು ಪಂಜಾಬಿನ ಶಾಕೋತ್ ನಲ್ಲಿ ಬಂಧಿಸಲಾಗಿದೆ.

                          ಈಗಾಗಲೇ ಬಂಧಿಸಲ್ಪಟ್ಟಿರುವ ಸಿಂಗ್ ಸಹಚರರರಿಂದ ಭಾರೀ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

                      ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ ಶಾಂತಿ ಹಾಗೂ ಕಾನೂನು ಮತ್ತು ಸುವ್ಯಸ್ಥೆಯನ್ನು ಕದಡಲು ಪ್ರಯತ್ನಿಸಿದ್ದ ಹಲವರನ್ನು ಬಂಧಿಸಿದ್ದಾರೆ.

                    ಕಳೆದ ತಿಂಗಳು ಅಜ್ನಾಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಸಿಂಗ್ ನ ಏಳು ಸಹಚರರಿಗೆ ಮಾ.23ರವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.

                    ಅಮೃತಪಾಲ್ ಕಳೆದ ವರ್ಷ ದುಬೈನಿಂದ ಪಂಜಾಬಿಗೆ ಮರಳಿ ಯುವಜನರನ್ನು ಮರಳಿ 'ನಿಜವಾದ ಸಿಖ್ಖಿ'ಗಳನ್ನಾಗಿಸುವ ಕುರಿತು ಭಾಷಣಗಳನ್ನು ಬಿಗಿಯುವುದರೊಡನೆ ಅವರಿಗೆ ಶಸ್ತ್ರ ವಿದ್ಯೆಯನ್ನು ಬೋಧಿಸಲು ಆರಂಭಿಸಿದಾಗಿನಿಂದ ರಾಜ್ಯದಲ್ಲಿ ಆತಂಕ ಹೆಚ್ಚತೊಡಗಿದೆ. 29ರ ಹರೆಯದ ಅಮೃತಪಾಲ್ ಭಾರತೀಯ ಸೇನಾಪಡೆಯಿಂದ ಕೊಲ್ಲಲ್ಪಟ್ಟ ಖಾಲಿಸ್ತಾನಿ ಉಗ್ರವಾದಿ ಜರ್ನಲ್ ಸಿಂಗ್ ಭಿಂದ್ರನವಾಲೆಯಂತೆ ಪೋಷಾಕು ಧರಿಸುವುದು ಆತನಂತೆಯೇ ವರ್ತಿಸುತ್ತಿದ್ದಾನೆ ಎಂದು indianexpress.com ವರದಿ ಮಾಡಿದೆ.

                                         ಯಾರು ಈ ಅಮೃತಪಾಲ್ ಸಿಂಗ್?

                   ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಅಮೃತಪಾಲ್ ಗಮನವನ್ನು ಸೆಳೆಯತೊಡಗಿದ್ದ. 2021ರಲ್ಲಿ ದಿಲ್ಲಿಯ ಕೆಂಪು ಕೋಟೆಯ ಮೇಲೆ ನಿಶಾನ ಸಾಹಿಬ್ ಧ್ವಜವನ್ನು ಹಾರಿಸುವ ಮೂಲಕ ಸುದ್ದಿಯಾಗಿದ್ದ ಪ್ರತಿಭಟನೆಯ ನಾಯಕ ದೀಪ್ ಸಿಧುವಿನ ಕಟ್ಟಾ ಬೆಂಬಲಿಗನಾಗಿದ್ದ ಅಮೃತಪಾಲ್ ಆಗ ದುಬೈನಲ್ಲಿ ವಾಸವಿದ್ದ. ಅಲ್ಲಿ 10 ವರ್ಷಗಳಿಂದಲೂ ಕುಟುಂಬದ ಒಡೆತನದ ಸಾರಿಗೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ. ಆತನ ಕುಟುಂಬ ಮೂಲತಃ ಅಮೃತಸರದ್ದಾಗಿದೆ.

                 2022, ಫೆಬ್ರವರಿಯಲ್ಲಿ ಸಿಧು ಕಾರು ಅಫಘಾತದಲ್ಲಿ ಮೃತಪಟ್ಟಿದ್ದರು. ವರ್ಷದ ಹಿಂದೆ ಸಿಧು ಸ್ಥಾಪಿಸಿದ್ದ 'ವಾರಿಸ್ ದೆ ಪಂಜಾಬ್' ಸಂಘಟನೆಯ ಮುಖ್ಯಸ್ಥನಾಗಲು ಅಮೃತಪಾಲ್2022, ಸೆಪ್ಟಂಬರ್ ನಲ್ಲಿ ದುಬೈನಿಂದ ಪಂಜಾಬಿಗೆ ಮರಳಿದ್ದ. ರೋಡೆಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ 'ಖಾಲಿಸ್ತಾನ್ ಜಿಂದಾಬಾದ್' ಘೋಷಣೆಗಳ ನಡುವೆ ಅಮೃತಪಾಲ್ 'ವಾರಿಸ್ ಪಂಜಾಬ್ ದೆ' ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದ.

                      ರೋಡೆಯಲ್ಲಿನ ತನ್ನ ಭಾಷಣದಲ್ಲಿ ಅಮೃತಪಾಲ್, 'ನಾವೆಲ್ಲ (ಪಂಜಾಬಿಗಳು) ಈಗಲೂ ಗುಲಾಮರಾಗಿದ್ದೇವೆ. ತಾವು ಸ್ವತಂತ್ರರಾಗಿದ್ದೇವೆ ಎಂದು ಭಾವಿಸಿರುವವರು ವೈದ್ಯರ ಸಲಹೆ ಪಡೆಯಬೇಕು. ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಿದೆ. ನಮ್ಮ ನೀರನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ನಮ್ಮ ಗುರುಗಳನ್ನು ಅಗೌರವಿಸಲಾಗುತ್ತಿದೆ. ಧರ್ಮನಿಂದೆಯಲ್ಲಿ ತೊಡಗುವವರನ್ನು ಪೊಲೀಸರಿಗೆ ಒಪ್ಪಿಸಲಾಗುವುದಿಲ್ಲ ಅಥವಾ ನ್ಯಾಯಾಲಯಗಳಿಗೆ ಕಳುಹಿಸುವುದಿಲ್ಲ. ನಾವೇ ಅವರಿಗೆ ಶಿಕ್ಷೆ ನೀಡುತ್ತೇವೆ' ಎಂದು ಹೇಳಿದ್ದ.

                         ಪ್ರಾದೇಶಿಕ ಮತ್ತು ರಾಷ್ಟ್ರೀಯ ರಾಜಕೀಯ ಪಕ್ಷಗಳು, ಸ್ತ್ರೀವಾದಿಗಳು, ಸಾಮಾಜಿಕ ಕಾರ್ಯಕರ್ತರು. ಕೆಲವು ಖಾಲಿಸ್ತಾನ್ ಪರ ಗುಂಪುಗಳ ವಿರುದ್ಧವೂ ತನ್ನ ಆಕ್ರಮಣಕಾರಿ ಭಾಷಣಗಳೊಂದಿಗೆ ಫೇಸ್ಬುಕ್ ಲೈವ್ಗಳು ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಅಮೃತಪಾಲ್ ತನ್ನ ಜನಪ್ರಿಯತೆಯನ್ನು ಬೆಳೆಸಿಕೊಂಡಿದ್ದ.

                    ಅಮೃತಪಾಲ್ 'ವಾರಿಸ್ ಪಂಜಾಬ ದೆ' ಮುಖ್ಯಸ್ಥನಾದ ಬಳಿಕ ದೀಪ್ ಸಿಧು ಕುಟುಂಬವು ಸಾರ್ವಜನಿಕವಾಗಿ ಆತನಿಂದ ಅಂತರವನ್ನು ಕಾಯ್ದುಕೊಂಡಿದೆ.

                   'ಸಾಮಾಜಿಕ ಹೋರಾಟಕ್ಕಾಗಿ, ಪಂಜಾಬಿನ ಸಮಸ್ಯೆಗಳನ್ನೆತ್ತಲು ಮತ್ತು ಅಗತ್ಯವುಳ್ಳವರಿಗೆ ಕಾನೂನು ನೆರವು ನೀಡಲು ನನ್ನ ಸೋದರ 'ವಾರಿಸ್ ಪಂಜಾಬ ದೆ' ಅನ್ನು ಸ್ಥಾಪಿಸಿದ್ದ, ಖಾಲಿಸ್ತಾನ್ ಪರ ಪ್ರಚಾರ ಮಾಡಲು ಅಲ್ಲ. ಅಮೃತಪಾಲ್ ಪಂಜಾಬಿನಲ್ಲಿ ಅಶಾಂತಿಯನ್ನು ಸೃಷ್ಟಿಸುವ ಬಗ್ಗೆ ಮಾತನಾಡುತ್ತಿದ್ದಾನೆ. ಆತ ನನ್ನ ಸೋದರನ ಮತ್ತು ಖಾಲಿಸ್ತಾನ್ ಹೆಸರು ಬಳಸಿಕೊಂಡು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾನೆ' ಎಂದು ದೀಪ್ ಸಿಧು ಸೋದರ ಮಂದೀಪ ಸಿಂಗ್ ಸಿಧು ಈ ಹಿಂದೆ ಮಾಧ್ಯಮಗಳಿಗೆ ತಿಳಿಸಿದ್ದರು.

                                           ಇಷ್ಟಕ್ಕೂ ಅಮೃತಪಾಲ್ ಮಾಡಬಯಸಿರುವುದು ಏನನ್ನು?

                   'ವಾರಿಸ್ ಪಂಜಾಬ ದೆ' ಪಂಜಾಬಿನ ಹಕ್ಕುಗಳಿಗಾಗಿ ಕೇಂದ್ರದ ವಿರುದ್ಧ ಹೋರಾಡಲು, ಪಂಜಾಬಿನ ಸಂಸ್ಕೃತಿ, ಭಾಷೆ, ಸಾಮಾಜಿಕ ಸ್ವರೂಪ ಮತ್ತು ಹಕ್ಕುಗಳ ಮೇಲೆ ದಾಳಿ ನಡೆದಾಗೆಲ್ಲ ಧ್ವನಿಯೆತ್ತಲು ಸಾಮಾಜಿಕ ಸಂಘಟನೆಯಾಗಿದೆ ಎದು ದೀಪ್ ಸಿಧು ಹೇಳಿದ್ದರು. ಸಂಘಟನೆಯ ಮುಖ್ಯಸ್ಥನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಮೃತಪಾಲ್, ತಾನು ಯುವಜನರನ್ನು ನಿಜವಾದ ಸಿಕ್ಖರನ್ನಾಗಿಸಲು ರಾಜ್ಯಾದ್ಯಂತ ಹಳ್ಳಿಗಳಿಗೆ ಭೇಟಿ ನೀಡುವುದಾಗಿ ಹೇಳಿದ್ದ.

                      ಪಂಜಾಬಿನಲ್ಲಿ ವ್ಯಾಪಕವಾಗಿರುವ ಮಾದಕ ದ್ರವ್ಯ ಪಿಡುಗಿನ ವಿರುದ್ಧ ತಮ್ಮ ಗ್ರಾಮಗಳನ್ನು ರಕ್ಷಿಸುವಂತೆ ಯುವಜನರಿಗೆ ಸೂಚಿಸಿದ್ದ ಅಮೃತಪಾಲ್, ಐಇಎಲ್ಟಿಎಸ್ನಲ್ಲಿ ತೇರ್ಗಡೆಗೊಂಡ ಬಳಿಕ ವಿದೇಶಗಳಿಗೆ ಓಡುವ ಬದಲು ಪಂಜಾಬಿನಲ್ಲಿಯೇ ಉಳಿದುಕೊಂಡು 'ಅದರ ಸ್ವಾತಂತ್ರ್ಯಕ್ಕಾಗಿ ಯುದ್ಧ'ವನ್ನು ಹೋರಾಡಬೇಕು ಎಂದು ಆಗ್ರಹಿಸಿದ್ದ.

              ಭಿಂದ್ರನವಾಲೆ ಜೊತೆಗೆ ಹೋಲಿಕೆ ಕುರಿತಂತೆ ಅಮೃತಪಾಲ್, 'ಭಿಂದ್ರನವಾಲೆ ನನ್ನ ಸ್ಫೂರ್ತಿ. ಆತ ತೋರಿಸಿದ್ದ ದಾರಿಯಲ್ಲಿ ನಾನು ನಡೆಯುತ್ತೇನೆ. ನಾನು ಅವನಂತೆ ಆಗಲು ಬಯಸಿದ್ದೇನೆ, ಏಕೆಂದರೆ ಪ್ರತಿಯೋರ್ವ ಸಿಖ್ ಅದನ್ನೇ ಬಯಸುತ್ತಿದ್ದಾನೆ. ಆದರೆ ನಾನು ಆತನ ನಕಲು ಮಾಡುವುದಿಲ್ಲ, ನಾನು ಆತನ ಪಾದದ ಧೂಳಿಗೂ ಸಮನಲ್ಲ' ಎಂದು ಹೇಳಿದ್ದ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries