ಕೊಚ್ಚಿ: ಕೇರಳದ ಪಟ್ಟಣಂತಿಟ್ಟ ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ಅವರು ತಮ್ಮ ಜೀವನದಲ್ಲಾದ ಕರಾಳ ಘಟನೆಯನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ. ಅವರು ಆರನೇ ವಯಸ್ಸಿನಲ್ಲಿದ್ದಾಗ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದನ್ನು ಮತ್ತು ಆ ನೋವಿನಿಂದ ಹೊರಬಂದಿದ್ದು ಹೇಗೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಕುರಿತು ವರದಿ ಮಾಡುವಾಗ ಗಮನಿಸಬೇಕಾದ ಮುಖ್ಯ ಅಂಶಗಳ ಬಗ್ಗೆ ಮಾಧ್ಯಮಗಳಿಗೆ ಎಚ್ಚರಿಕೆ ನೀಡಲು ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ಉದ್ಘಾಟಿಸಿ ಮಾತನಾಡಿದರು.
ನಾನು ಆರನೇ ವಯಸ್ಸಿನಲ್ಲಿ ಕೆಟ್ಟ ಅನುಭವ ಎದುರಿಸಿದೆ. ಆ ಇಬ್ಬರು ಮುಖಗಳು ನನಗೆ ಸರಿಯಾಗಿ ನೆನಪಿಲ್ಲ. ನನ್ನನ್ನು ಪ್ರೀತಿಯಿಂದ ಅವರ ಬಳಿಗೆ ಕರೆದು ನನ್ನ ದೇಹವನ್ನು ಮುಟ್ಟಿದರು. ನನ್ನ ಬಟ್ಟೆಗಳನ್ನು ಕಳಚಿ, ಬೆತ್ತಲೆಗೊಳಿಸಲು ಯತ್ನಿಸಿದರು. ಏನೋ ಅನಿರೀಕ್ಷಿತ ಘಟನೆ ನಡೆಯಲಿದೆ ಎಂಬುದು ನನಗೆ ಅರ್ಥವಾದಾಗ ನಾನು ಅವರ ಬಿಗಿ ಹಿಡಿತದಿಂದ ಬಿಡಿಸಿಕೊಂಡು ಓಡಿ ಹೋದೆ. ಆ ಸಮಯದಲ್ಲಿ ನನಗೆ ಹಾಗೆ ಮಾಡಬೇಕೆಂದು ಅನಿಸಿತು. ಆದರೆ, ಎಲ್ಲ ಮಕ್ಕಳೂ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ದಿವ್ಯಾ ಅವರು ಹೇಳಿದರು.
ನನ್ನ ಪಾಲಕರು ಮಾನಸಿಕವಾಗಿ ನನಗೆ ಬೆಂಬಲ ನೀಡಿದ್ದರಿಂದ ನಾನು ಆ ನೋವಿನಿಂದ ಹೊರಬರಲು ಸಾಧ್ಯವಾಯಿತು. ಆ ಬಳಿಕ ನಾನು ಜನಸಂದಣಿಯನ್ನು ಎದುರಿಸಿದಾಗ, ಆ ಎರಡು ಮುಖಗಳು ಇವೆಯೇ ಎಂದು ನೋಡಲು ನಾನು ಎಲ್ಲರನ್ನೂ ಎಚ್ಚರಿಕೆಯಿಂದ ನೋಡುತ್ತೇನೆ. ಇಂತಹ ಕರಾಳ ಘಟನೆಗಳು ಅಮಾಯಕ ಮಕ್ಕಳ ಜೀವನದ ಉದ್ದಕ್ಕೂ ಕಾಡುತ್ತವೆ ಎಂದರು.





