ಕಾಸರಗೋಡು: ಉದ್ಯಾವರ ಗುತ್ತು ನಿವಾಸಿ ರಮೇಶ್ ಎಂಬವರ ಪುತ್ರ, ಐ.ಟಿ.ಐ ವಿದ್ಯಾರ್ಥಿ ದೀಕ್ಷಿತ್(19)ಎಂಬವರ ಮೃತದೇಹ ಮನೆಯಿಂದ ಅಲ್ಪ ದೂರದ ಕುರುಚಲು ಕಾಡಲ್ಲಿ ನಿಗೂಢವಾಗಿ ಪತ್ತೆಯಾಗಿದೆ. ಮಂಗಳೂರಿನ ಶಿಕ್ಷಣ ಸಂಸ್ಥೆಯೊಂದರಲ್ಲಿ ಐಟಿಐ ವಿದ್ಯಾರ್ಥಿಯಾಗಿರುವ ದೀಕ್ಷಿತ್, ಮನೆ ಕೆಲಸ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಗುರುವಾರ ಮನೆಯಲ್ಲಿ ಉಳಿದುಕೊಂಡಿದ್ದರು. ತಂದೆ, ತಾಯಿ ಹಾಗೂ ಸಹೋದರ ಹೊರಗೆ ತೆರಳಿದ್ದ ಸಂದರ್ಭ ದೀಕ್ಷಿತ್ಗೆ ಫೋನ್ಕರೆ ಬಂದಿತ್ತು.
ಇದಾದ ಅಲ್ಪ ಹೊತ್ತಲ್ಲಿ ದೀಕ್ಷಿತ್ ಮನೆಯಿಂದ ಹೊರಗೆ ತೆರಳಿದ್ದು, ಬಹಳ ಹೊತ್ತಿನ ವರೆಗೂ ವಾಪಸಾಗಿರಲಿಲ್ಲ. ಈ ಮಧ್ಯೆ ಕಾಡಿಗೆ ಕಟ್ಟಿಗೆ ಸಂಗ್ರಹಕ್ಕೆ ತೆರಳಿದ್ದ ಮಹಿಳೆಯರಿಗೆ ಮೊಬೈಲ್ ರಿಂಗಣಿಸಿರುವುದು ಕೇಳಿ ಬಂದಿದ್ದು, ಅತ್ತ ತೆರಳಿ ನೋಡಿದಾಗ ದೀಕ್ಷಿತ್ ನೆಲದಲ್ಲಿ ಬಿದ್ದುಕೊಂಡಿರುವುದು ಪತ್ತೆಯಾಗಿತ್ತು. ತಕ್ಷಣ ಸ್ಥಳೀಯರು ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ದೀಕ್ಷಿತ್ ಹಣೆ ಹಾಗೂ ಕತ್ತಿನ ಭಾಗದಲ್ಲಿ ಗಾಯದ ಗುರುತುಗಳಿದ್ದು, ಸನಿಹದಲ್ಲಿ ನೈಲಾನ್ ಹಗ್ಗವೂ ಪತ್ತೆಯಾಗಿದೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಮಡಿದ್ದಾರೆ. ದೀಕ್ಷಿತ್ ಅವರ ಮೊಬೈಲ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಫೋನ್ ಕರೆಗಳನ್ನು ತಪಾಸಣೆ ನಡೆಸುತ್ತಿದ್ದಾರೆ.