ನವದೆಹಲಿ: 'ನೌಕರನ ಸೇವಾವಧಿಯು ಒಂದು ದಿನವಷ್ಟೇ ಇದ್ದು, ಮಾರನೇ ದಿನವೇ ನಿವೃತ್ತರಾಗುತ್ತಾರೆ ಎಂಬ ಕಾರಣಕ್ಕೇ ನೌಕರನ ವಾರ್ಷಿಕ ವೇತನ ಬಡ್ತಿಯನ್ನು ನಿರಾಕರಿಸುವಂತಿಲ್ಲ' ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿತು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು (ಕೆಪಿಟಿಸಿಎಲ್) ಈ ಸಂಬಂಧ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ಪೀಠವು ವಜಾ ಮಾಡಿತು.
'ನಿಗದಿತ ಹಿಂದಿನ ಒಂದು ವರ್ಷದ ಅವಧಿಯಲ್ಲಿ ಸಲ್ಲಿಸಿರುವ ಸೇವೆ ಹಾಗೂ ಸನ್ನಡತೆಗಾಗಿ ನೌಕರ ವೇತನ ಬಡ್ತಿಗೆ ಅರ್ಹರಾಗಿರುತ್ತಾರೆ. ಮಾರನೇ ದಿನವೇ ನಿವೃತ್ತನಾಗುತ್ತಾನೆ ಎಂಬ ಕಾರಣಕ್ಕೇ ಅದನ್ನು ನಿರಾಕರಿಸಲಾಗದು' ಎಂದು ಪೀಠ ಅಭಿಪ್ರಾಯಪಟ್ಟಿತು.
ಸಿ.ಪಿ.ಮುಂದಿನಮನಿ ಮತ್ತು ಇತರರು ವೇತನ ಬಡ್ತಿಗೆ ಅರ್ಹರಾಗಿದ್ದರು. ಆದರೆ, ನಾಳೆಯೇ ನಿವೃತ್ತರಾಗುತ್ತಾರೆ ಎಂಬ ಕಾರಣ ನೀಡಿ ಕೆಪಿಟಿಸಿಎಲ್ ನಿರಾಕರಿಸಿತ್ತು. 'ವೇತನ ಬಡ್ತಿ ಪಡೆಯುವ ದಿನ ನೌಕರ ಸೇವೆಯಲ್ಲಿ ಇರಬೇಕು' ಎಂದು ಕೆಪಿಟಿಸಿಎಲ್ ಕಾರಣ ನೀಡಿತ್ತು.
ಕೆಪಿಟಿಸಿಎಲ್ನ ಈ ನಿರ್ಧಾರದ ವಿರುದ್ಧ ನೌಕರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರ ಸಿಬ್ಬಂದಿಗೆ ಒಂದು ವಾರ್ಷಿಕ ವೇತನ ಬಡ್ತಿ ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೆಪಿಟಿಸಿಎಲ್ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
'ನೌಕರ ಹಿಂದಿನ ಒಂದು ವರ್ಷ ಸಲ್ಲಿಸಿದ ಸೇವೆಗಾಗಿ ವೇತನ ಬಡ್ತಿಗೆ ಅರ್ಹನಾಗಿರುತ್ತಾನೆ. ನಿಯಮಗಳನ್ನು ಅನ್ಯರೀತಿ ವ್ಯಾಖ್ಯಾನಿಸಿ ಇದನ್ನು ನಿರಾಕರಿಸುವುದು ನೌಕರನಿಗೆ, ಆತನದಲ್ಲದ ತಪ್ಪಿಗೆ ಶಿಕ್ಷೆ ನೀಡಿದಂತಾಗುತ್ತದೆ' ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿತು.
ಇಂತಹದೇ ಅಭಿಪ್ರಾಯವನ್ನು ಗುಜರಾತ್, ಮಧ್ಯಪ್ರದೇಶ, ಒಡಿಶಾ, ಮದ್ರಾಸ್ ಹೈಕೋರ್ಟ್ ಕೂಡಾ ವ್ಯಕ್ತಪಡಿಸಿವೆ ಎಂದೂ ಪೀಠ ಉಲ್ಲೇಖಿಸಿತು. ಆದರೆ, ಆಂಧ್ರಪ್ರದೇಶ ಹೈಕೋರ್ಟ್ ಪೂರ್ಣಪೀಠ ಈ ಬಗ್ಗೆ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಕೋರ್ಟ್ ಸಹಮತ ವ್ಯಕ್ತಪಡಿಸಲಿಲ್ಲ.