ಡೆಹ್ರಾಡೂನ್: ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್ ನಿಂದ 155 ಕಿ.ಮೀ ದೂರದಲ್ಲಿರುವ ತುನಿ ಸೇತುವೆ ಬಳಿಯ ಬಹುಮಹಡಿ ಮನೆಯೊಂದರಲ್ಲಿ ನಿನ್ನೆ ಸಂಜೆ ಸಂಭವಿಸಿದ ಭಾರೀ ಬೆಂಕಿ ಅವಘಡದಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ.
ಸಿಲಿಂಡರ್ ಸ್ಫೋಟದಿಂದ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ಇಡೀ ಮನೆ ಸುಟ್ಟು ಕರಕಲಾಗಿದೆ ಮನೆಯಲ್ಲಿದ್ದ ಸಿಲಿಂಡರ್ಗಳು ಒಂದರ ಹಿಂದೆ ಒಂದರಂತೆ ಸ್ಫೋಟಗೊಂಡಿವೆ.
ಪೊಲೀಸ್ ಮೂಲಗಳ ಪ್ರಕಾರ, ತುನಿಯಲ್ಲಿರುವ ಸೂರತ್ ರಾಮ್ ಜೋಶಿ ಅವರ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಸಂಜೆ 4 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಈ ಕಟ್ಟಡದಲ್ಲಿ ಮಾಲೀಕನ ಜತೆಗೆ ಐದು ಕುಟುಂಬಗಳು ಬಾಡಿಗೆಗೆ ವಾಸವಾಗಿವೆ. ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಬಾಡಿಗೆದಾರರ ಐದು ಮಕ್ಕಳು, ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ ಮನೆಯಲ್ಲಿದ್ದರು.
ಸಂಜೆ ಬಾಡಿಗೆದಾರರಲ್ಲಿ ಒಬ್ಬರಾದ ವಿಕ್ಕಿ ಅವರ ಪತ್ನಿ ಕುಸುಮ್ ಅವರು ಅಡುಗೆ ಕೋಣೆಯಲ್ಲಿ ಎಲ್ಪಿಜಿ ಸಿಲಿಂಡರ್ ಬದಲಾಯಿಸುತ್ತಿದ್ದಾಗ ಏಕಾಏಕಿ ಸಿಲಿಂಡರ್ಗೆ ಬೆಂಕಿ ಹೊತ್ತಿಕೊಂಡಿದೆ. ಕುಸುಮ್ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು, ಆದರೆ ಬೆಂಕಿ ಇಡೀ ಮನೆಗೆ ಆವರಿಸಿದೆ.
"ಮನೆಯಿಂದ ಹೊಗೆ ಬರುತ್ತಿರುವುದನ್ನು ನೋಡಿ ಇತರ ಕುಟುಂಬಗಳ ಸದಸ್ಯರು, ಹತ್ತಿರದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಲ್ಲದೆ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರಲು ತುಂಬ ತಡವಾಗಿದೆ.
ಮನೆಯೊಳಗಿದ್ದ ನಾಲ್ವರು ಮಕ್ಕಳು ಬೆಂಕಿಗೆ ಆಹುತಿಯಾಗಿದ್ದಾರೆ. ಮೃತರನ್ನು ತುನಿಯ ಜಕ್ತಾ ನಿವಾಸಿ ತ್ರಿಲೋಕ್ ಎಂಬವರ ಪುತ್ರಿ ಗುಂಜನ್(10), ಹಿಮಾಚಲ ಪ್ರದೇಶದ ಬಿಕ್ತದ್ನ ಜಯಲಾಲ್ ಎಂಬುವವರ ಪುತ್ರಿ ರಿದ್ಧಿ(10), ವಿಕ್ಕಿ ಚೌಹಾಣ್ ಅವರ ಮಕ್ಕಳಾದ ಆದಿರಾ ಅಲಿಯಾಸ್ ಮಿಶ್ತಿ(6) ಮತ್ತು ಸೇಜಲ್(3) ಎಂದು ಗುರುತಿಸಲಾಗಿದೆ.
![](https://pbs.twimg.com/amplify_video_thumb/1644147714865897473/img/TR9J1YMlSG9JO9CD.jpg)