ನವದೆಹಲಿ: ಶಾಸನಗಳ ರಚನೆ ವೇಳೆ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಹಿರಿಯ ವಕೀಲರ ಸಹಾಯ ಪಡೆಯುವ ಪ್ರಸ್ತಾವನೆಯು ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ರಾಜ್ಯಸಭೆಗೆ ಗುರುವಾರ ತಿಳಿಸಲಾಯಿತು.
ಶಾಸನ ಕರಡುಗಳ ರಚನೆಯು ಸರಳವಾಗಿ, ಸ್ಪಷ್ಟವಾಗಿ ಮತ್ತು ನಿಖರವಾಗಿ ಇರುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯದ ಶಾಸನ ರಚನೆ ವಿಭಾಗವು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಲಿಖಿತ ಉತ್ತರ ನೀಡಿದರು.
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳಲ್ಲಿ ವ್ಯಾಜ್ಯಗಳು ದಾಖಲಾಗಲು, ಒಂದಕ್ಕಿಂದ ಹೆಚ್ಚು ವ್ಯಾಖ್ಯಾನಗಳು ಇರುವಂತೆ ಶಾಸನಗಳನ್ನು ತಪ್ಪಾಗಿ ರಚಿಸುವುದೂ ಒಂದು ಪ್ರಮುಖ ಕಾರಣ ಎಂದು ಸರ್ಕಾರಕ್ಕೆ ತಿಳಿದಿದೆಯೇ ಎಂದು ರಿಜಿಜು ಅವರನ್ನು ರಾಜ್ಯಸಭೆಯಲ್ಲಿ ಪ್ರಶ್ನಿಸಲಾಗಿತ್ತು. ಶಾಸನಗಳ ರಚನೆಯಲ್ಲಿ ನಿವೃತ್ತ ನ್ಯಾಯಮೂರ್ತಿಗಳ ಸಹಾಯ ಪಡೆಯುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆಯೇ ಎಂದು ಕೇಳಲಾಗಿತ್ತು.
ಇದಕ್ಕೆ ಉತ್ತರಿಸಿದ ರಿಜಿಜು ಅವರು, ಶಾಸನಗಳ ಅಭಿವ್ಯಕ್ತಿಯಲ್ಲಿ ಸ್ಪಷ್ಟತೆ, ಸೂಕ್ತ ಪದಗಳನ್ನು ಬಳಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತದೆ. ಶಾಸನಗಳನ್ನು ಸರಳವಾಗಿ ಮತ್ತು ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ರಚಿಸುವಂತೆ ಕೇಂದ್ರದ ಎಲ್ಲಾ ಸಚಿವರಿಗೆ ಶಾಸನ ರಚನೆ ವಿಭಾಗವು ಮನವಿ ಮಾಡಿದೆ ಎಂದು ಅವರು ಹೇಳಿದರು.