ನವದೆಹಲಿ : ಬೆಂಗಳೂರಿನಲ್ಲಿ 2008 ರಲ್ಲಿ ನಡೆದ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷ ಅಬ್ದುಲ್ ನಾಸರ್ ಮಅದನಿ ಅವರಿಗೆ ಕೇರಳಕ್ಕೆ ಭೇಟಿ ನೀಡಲು ಸುಪ್ರೀಂ ಕೋರ್ಟ್ ಅನುಮತಿಸಿದೆ.
ಪ್ರಸ್ತುತ ಬೆಂಗಳೂರಿನಲ್ಲಿರುವ ಮಅದನಿ ಅವರಿಗೆ ಕೇರಳದಲ್ಲಿ ಒಂದು ತಿಂಗಳ ಕಾಲ ಕರ್ನಾಟಕ ಪೊಲೀಸರ ಮೇಲುಸ್ತುವಾರಿಯಲ್ಲಿ ಉಳಿದುಕೊಳ್ಳಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಆದರೆ ಅವರ ಕೇರಳ ವಾಸ್ತವ್ಯ ಸಂದರ್ಭ ಕರ್ತವ್ಯದಲ್ಲಿರಲಿರುವ ಕರ್ನಾಟಕ ಪೊಲೀಸರ ಖರ್ಚುವೆಚ್ಚಗಳ ಜವಾಬ್ದಾರಿಯನ್ನು ಮಅದನಿ ಅವರೇ ನೋಡಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.
ಮನೆಗೆ ವಾಪಸಾಗಿ ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಲು ತಮ್ಮ ಜಾಮೀನು ಷರತ್ತುಗಳಿಗೆ ಮಾರ್ಪಾಟು ತರುವಂತೆ ಮಅದನಿ ಸುಪ್ರೀಂ ಕೋರ್ಟ್ ಕದತಟ್ಟಿದ್ದರು. ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಮಅದನಿ ಅವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಅವರಿಗೆ ಈ ಹಿಂದೆ ಜಾಮೀನು ನೀಡಲಾಗಿದ್ದರೂ ಬೆಂಗಳೂರು ಬಿಟ್ಟು ತೆರಳಲು ಅನುಮತಿಯಿರಲಿಲ್ಲ.
ಇದಕ್ಕೂ ಮುಂಚೆ ತಮ್ಮ ಮಗಳ, ಮಗನ ಮದುವೆಗೆ ಹಾಜರಾಗಲು ಹಾಗೂ ಅವರ ಅನಾರೋಗ್ಯಪೀಡಿತ ತಾಯಿಯನ್ನು ನೋಡಲು ಕೋರ್ಟ್ ಅನುಮತಿಯೊಂದಿಗೆ ಮಅದನಿ ಆಗಮಿಸಿದ್ದರು. ಅವರ ತಾಯಿ 2018 ರಲ್ಲಿ ನಿಧನರಾಗಿದ್ದರು.
2017ರಲ್ಲಿ ಕೇರಳಕ್ಕೆ ತೆರಳಿ ಅಲ್ಲಿ 12 ದಿನಗಳ ಕಾಲ ಉಳಿಯಲು ಸುಪ್ರೀಂ ಕೋರ್ಟ್ ಅವರಿಗೆ ಅನುಮತಿ ನೀಡಿತ್ತು. ಅದರ ವೆಚ್ಚವಾಗಿ ರೂ. 15 ಲಕ್ಷ ಹಣವನ್ನು ಕರ್ನಾಟಕ ಸರ್ಕಾರ ಬೇಡಿಕೆಯಿರಿಸಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪಿಸಿದ ನಂತರ ಅವರಿಗೆ ರೂ. 1,18,000 ವೆಚ್ಚ ವಿಧಿಸಲಾಗಿತ್ತು.
ಕೇರಳಕ್ಕೆ ತೆರಳಲು ಮಅದನಿ ಕೋರಿದ್ದ ಅನುಮತಿಗೆ ಕರ್ನಾಟಕ ಪೊಲೀಸರ ಉಗ್ರ ನಿಗ್ರಹ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿತ್ತು ಹಾಗೂ ದೇಶದ ಭದ್ರತೆ ಮತ್ತು ಸಾರ್ವಭೌಮತೆಯ ಮೇಲೆ ಪರಿಣಾಮ ಬೀರುವ ಪ್ರಕರಣದಲ್ಲಿ ಅವರು ಆರೋಪಿ ಎಂಬುದನ್ನು ನೆನಪಿಸಿತ್ತಲ್ಲದೆ ಜಾಮೀನು ಷರತ್ತುಗಳನ್ನು ಸಡಿಲಿಸಿದರೆ ಅವರು ಪರಾರಿಯಾಗುವ ಸಾಧ್ಯತೆಯೂ ಇದೆ ಎಂದು ಹೇಳಿತ್ತು.
ಬೆಂಗಳೂರಿನಲ್ಲಿ ಜುಲೈ 25, 2008 ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಸಮೀಪ ನಡೆದ ಸರಣಿ ಸ್ಫೋಟಗಳಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು 20 ಮಂದಿ ಇತರರು ಗಾಯಗೊಂಡಿದ್ದರು.