ಕಾಸರಗೋಡು: ಕೋಟ್ಟಾಯಂ ಜಿಲ್ಲೆಯ ಕೊಟ್ಟರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆಯನ್ನು ಪ್ರಕರಣವೊಂದರ ಆರೋಪಿ, ಶಾಲಾ ಶಿಕ್ಷಕ ಇರಿದು ಕೊಲೆಗೈದ ಪ್ರಕರಣ ಖಂಡಿಸಿ ಕಾಸರಗೋಡು ಜನರಲ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಪ್ರತಿಭಟನೆ ನಡೆಸಿದರು.
ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ಮತ್ತು ಕೇರಳ ಗವರ್ನಮೆಂಟ್ ಮೆಡಿಕಲ್ ಆಫೀಸರ್ಸ್ ಅಸೋಸಿಯೇಶನ್(ಕೆಜಿಎಂಓಎ)ಸಹಯೋಗದಲ್ಲಿ ಕೇರಳಾಧ್ಯಂತ ಹಮ್ಮಿಕೊಳ್ಳಲಾದ ಮುಷ್ಕರದ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಧರಣಿ ಆಯೋಜಿಸಲಾಗಿತ್ತು. ವೈದ್ಯರ ಜತೆಗೆ ಆರೋಗ್ಯ ಇಲಾಖೆ ಸಿಬ್ಬಂದಿಯೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕಾಸರಗೋಡು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಜನರಲ್ ಆಸ್ಪತ್ರೆಗಳಲ್ಲಿ ಪ್ರತಿಭಟನೆ ನಡೆಯಿತು. ಕೇರಳ ರಾಜ್ಯಾದ್ಯಂತ ಬುಧವಾರ ಬೆಳಗ್ಗೆ ಆರಂಭಗೊಂಡ ಮುಷ್ಕರ ಸಂಜೆ ವರೆಗೆ ನಡೆಯಿತು. ಈ ಸಂದರ್ಭ ತುರ್ತು ಸೇವೆ ಹೊರತುಪಡಿಸಿ ಉಳಿದ ಸೇವೆಗಳನ್ನು ಬಹಿಷ್ಕರಿಸಿದ್ದರು. ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಏಕಾಏಕಿ ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುವಂತಾಯಿತು.
ಕೋಟ್ಟಾಯಂ ನಿವಾಸಿ ಡಾ. ವಂದನಾ ರಾವ್(23)ಅವರನ್ನು ವಿಚಾರಣಾಧೀನ ಕೈದಿ, ಕೋಟ್ಟಾಯಂ ಕಡವತ್ತೂರ್ ಶಾಲಾ ಶಿಕ್ಷಕ ಸಂದೀಪ್(42)ಆಸ್ಪತ್ರೆ ಬಳಕೆಯ ಕತ್ತರಿಯಿಂದ ತಿವಿದು ಹತ್ಯೆಗೈದಿದ್ದನು.




