ಕುಂಬಳೆ : 'ಕಾಸರಗೋಡಿನಲ್ಲಿ ಮೂರು ಮಾದರಿಯ ಕನ್ನಡ ಹೋರಾಟ ನಡೆದಿದೆ. ಬೀದಿಗಿಳಿದು ನಡೆಸುವ ಹೋರಾಟ ಮೊದಲನೆಯದು. ಅದರ ಕಾವು ಈಗ ತಗ್ಗುತ್ತಾ ಬಂದಿದೆ' ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಉಪನ್ಯಾಸಕ ಡಾ. ರಾಧಾಕೃಷ್ಣ ಬೆಳ್ಳೂರು ಹೇಳಿದರು.
ಅವರು ಶನಿವಾರ ಕುಂಬ್ಳೆಯ ನಾರಾಯಣಮಂಗಲ ಎ.ಎಲ್.ಪಿ ಶಾಲೆಯಲ್ಲಿ ಕರ್ನಾಟಕ ಸಾಮಾಜಿಕ ಸಾಂಸ್ಕøತಿಕ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ಗಡಿ ಉತ್ಸವ ಉದ್ಘಾಟಿಸಿ ಮಾತನಾಡಿದರು.
'ಸಾಹಿತ್ಯಕ ಮತ್ತು ಸಾಂಸ್ಕೃತಿಕವಾದ ಹೋರಾಟವು ಮುಂದಿನ ತಲೆಮಾರಿಗೆ ದಾಖಲೆಯಾಗಿ ಉಳಿಯುವ ಮಾದರಿಯದು. ಇಲ್ಲಿಂದ ಆರು ಸಾವಿರಕ್ಕೂ ಹೆಚ್ಚು ಕನ್ನಡ ಪುಸ್ತಕಗಳು ಪ್ರಕಟವಾಗಿವೆ. ಇದು ಇಲ್ಲಿ ಕನ್ನಡ ಇತ್ತು, ಇದು ಕನ್ನಡ ನಾಡಾಗಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುವ ಐತಿಹಾಸಿಕವಾದ ಸಂಗತಿ. ಕಾನೂನಾತ್ಮಕವಾದ ಹೋರಾಟ. ಕಳ್ಳಿಗೆ ಮಹಾಬಲ ಭಂಡಾರಿ, ಯು.ಪಿ. ಕುಣಿಕುಳ್ಳಾಯ ಮುಂತಾದವರು ಕೋರ್ಟಿಗೆ ಹೋಗಿ ಕಾಸರಗೋಡಿನ ಕನ್ನಡಿಗರಿಗೆ ಹಲವಾರು ಅನುಕೂಲತೆಗಳನ್ನು ಒದಗಿಸಿಕೊಟ್ಟಿದ್ದಾರೆ. ಈಗ ಆ ರೀತಿಯ ಹೋರಾಟವೂ ತುಸು ತಗ್ಗಿದಂತೆ ಭಾಸವಾಗುತ್ತಿದೆ. ಸದ್ಯ ಕಾಸರಗೋಡಿನಲ್ಲಿ ಕನ್ನಡ ಉಳಿಯಬೇಕಿದ್ದರೆ ಅದನ್ನು ಸಾಂಸ್ಕೃತಿಕವಾಗಿ ಉಳಿಸಲು ಸಾಧ್ಯವಾಗಬೇಕು. ಕಾಸರಗೋಡಿನ ಜನತೆಗೆ ಸಾಂಸ್ಕೃತಿಕವಾಗಿ ಕನ್ನಡದ ಪ್ರೌಢಿಮೆಯನ್ನು ತಿಳಿಸುವಂತಹ ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಬೇಕಾಗಿವೆ. ಜನಸಾಮಾನ್ಯರನ್ನು ಕನ್ನಡದ ಹೆಸರಲ್ಲಿ ಅಭಿಮಾನದಿಂದ ಒಂದುಗೂಡುವಂತೆ ಮಾಡಬೇಕಿದ್ದರೆ ಕನ್ನಡ ಕಾರ್ಯಕ್ರಮಗಳ ಆಧಿಕ್ಯ ಮತ್ತು ಸಂಘಟನೆಗಳ ಆಧಿಕ್ಯ ಎರಡೂ ಕಾಸರಗೋಡು ಕನ್ನಡ ಹೋರಾಟದ ದೃಷ್ಟಿಯಿಂದ ಅಗತ್ಯ ಎಂದರು.
ಇದೇ ಸಂದರ್ಭದಲ್ಲಿ ಕನ್ನಡವನ್ನೇ ಉಸಿರಾಗಿಸಿಕೊಂಡಿರುವ ಶಿಕ್ಷಣ ತಜ್ಞ ವಿ. ಬಿ. ಕುಳಮರ್ವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಾಮಾಜಿಕ ಸಾಂಸ್ಕøತಿಕ ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷೆ ರಾಣಿ ಪುಷ್ಪಲತಾದೇವಿ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯನಿ ಸ್ಮಿತಾ, ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಸುರೇಶ್ ನೆಗಳಗುಳಿ ಉಪಸ್ಥಿತರಿದ್ದರು. ಗೀತಾ ಅವರು ಪ್ರಾರ್ಥನೆಗೈದರು. ರಾಣಿ ಪುಷ್ಪಲತಾದೇವಿ ಸ್ವಾಗತಿಸಿ, ಗಂಗಾಧರ್ ಗಾಂಧಿ ವಂದಿಸಿದರು. ರೇಖಾ ಸುದೇಶ್ ರಾವ್ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ನಡೆದ ಕವಿಗೋಷ್ಠಿಯಲ್ಲಿ ಮೂವತ್ತಕ್ಕೂ ಹೆಚ್ಚು ಕವಿಗಳು ಕಾವ್ಯ ವಾಚನ ಮಾಡಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಸಾಂಸ್ಕøತಿಕ ಉತ್ಸವ, ಮನೋರಂಜನ ಕಾರ್ಯಕ್ರಮಗಳು ಜರುಗಿದವು. ಭಾಗವಹಿಸಿದ ಎಲ್ಲ ಕವಿಗಳಿಗೆ ಹಾಗೂ ಕಲಾವಿದರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.



.jpg)
