ಕಾಸರಗೋಡು: ಜಿಲ್ಲೆಯಲ್ಲಿ ವಿವಿಧ ಸಮಸ್ಯೆಗಳ ಬಗ್ಗೆ ತುರ್ತು ಗಮನಹರಿಸಿ ಇವುಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಆಗ್ರಹಿಸಿದ್ದಾರೆ. ಸಿಎಂ ಜತೆ ನಡೆಸಿದ ಸಮಾಲೋಚನೆಯಲ್ಲಿ ಈ ಬಗ್ಗೆ ಒತ್ತಾಯಿಸಿದ್ದಾರೆ.
ಮುಂಬೈನಿಂದ ಕಣ್ಣೂರಿಗೆ ನೇರ ವಿಮಾನ ಸೇವೆ ಸ್ಥಗಿತಗೊಳಿಸುವ ಬಗ್ಗೆ ಕೇಂದ್ರ ಮಟ್ಟದಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಬೇಕು, ಜತೆಗೆ ಮುಂಬೈನಿಂದ ಕಣ್ಣೂರಿಗೆ ಏಕೈಕ ನೇರ ಸೇವೆಯಾಗಿದ್ದ ಗೋಫಾಸ್ಟ್ ಸೇವೆಯನ್ನು ಏಕಾಏಕಿ ಸ್ಥಗಿತಗೊಳಿಸಿರುವುದರಿಂದ ಪ್ರಸ್ತುತ ಮುಂಬೈ-ಕಣ್ಣೂರು ನಡುವೆ ನೇರ ವಿಮಾನದ ಆಯ್ಕೆ ಇಲ್ಲದಂತಾಗಿದೆ. ಇನ್ನು ರೈಲ್ವೆ ವಲಯವೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಿರಿಯ ನಾಗರಿಕರಿಗೆ ಉಚಿತ ರೈಲ್ವೆ ಪ್ರಯಾಣವನ್ನು ಮರುಸ್ಥಾಪಿಸಲು ರಾಜ್ಯ ಸರ್ಕಾರ ತೀವ್ರ ಒತ್ತಾಯ ಹೇರಬೇಖು, ಕೋಟಿಕುಳಂ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಬೇಕು. ಈ ಬಗ್ಗೆ ಆರ್ಬಿಡಿಸಿಕೆ ಮತ್ತು ಕೇರಳ ಲೋಕೋಪಯೋಗಿ ಖಾತೆ ಸಚಿವರಿಗೆ ಮನವಿ ಮಾಡಲಾಗಿದೆ.
ಕಾಞಂಗಾಡು-ಕಾಣಿಯೂರು ರೈಲು ಮಾರ್ಗ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಈಗಾಗಲೇ ಕರ್ನಾಟಕದ ಮುಖ್ಯಮಂತ್ರಿ, ಕೇಂದ್ರ ರೈಲ್ವೇ ಸಚಿವರು, ರೈಲ್ವೆ ಮಂಡಳಿಗೆ ಪತ್ರ ಬರೆಯಲಾಗಿದೆ. ಪ್ರಸಕ್ತ ರೈಲ್ವೆ ಮಾರ್ಗವು ಇತರ ಹೊಸ ರೈಲು ಮಾರ್ಗಗಳಿಗಿಂತ ಕಡಿಮೆ ಪರಿಸರ ಹಾನಿ ಮತ್ತು ಕಡಿಮೆ ಆರ್ಥಿಕ ಹೊರೆ ಹೊಂದಿರುವ ಯೋಜನೆ ಎಂಬುದು ಈಗಾಗಲೇ ಸಾಬೀತಾಗಿದೆ. ಕಾಸರಗೋಡು ಜಿಲ್ಲೆಯ ಪ್ರಮುಖ ನಗರ ಕಾಞಂಗಾಡ್ನ ಎ ದರ್ಜೆ ನಿಲ್ದಾಣದಲ್ಲಿ ಹಳಿ ದಾಟಲು ಒಂದೇ ಒಂದು ಮೇಲ್ಸೇತುವೆ ಇರುವುದರಿಂದ ವಿದ್ಯಾರ್ಥಿಗಳು ಮೇಲ್ಸೇತುವೆ ಬಳಸದೆ ಹಳಿ ದಾಟಿ ಸಮೀಪದ ಶಾಲೆಗೆ ತೆರಳುವುದು ಸಾಮಾನ್ಯ ದೃಶ್ಯವಾಗಿದೆ. ವೇದಿಕೆಯ ಎರಡೂ ಬದಿಯಲ್ಲಿ ಮೇಲ್ಸೇತುವೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಕಾಸರಗೋಡು ಭಾಷಾ ಅಲ್ಪಸಂಖ್ಯಾತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸುವಂತೆ ಸಂಸದರು ಮುಖ್ಯಮಂತ್ರಿಯನ್ನು ಆಗ್ರಹಿಸಿದ್ದಾರೆ.
ಕಾಸರಗೋಡಿನಲ್ಲಿ ಸರ್ಕಾರಿ ಮುದ್ರಣಾಲಯ, ಕನ್ನಡ ಅನುವಾದ ಕೋಶದ ರಚನೆ, ಜಿಲ್ಲಾ ವಾರ್ತಾ ಮತ್ತು ಮಾಹಿತಿ ಕೇಂದ್ರದಲ್ಲಿ ಕನ್ನಡದ ಸಹಾಯಕ ಮಾಹಿತಿ ಅಧಿಕಾರಿ ಹುದ್ದೆ, ಬದಿಯಡ್ಕದಲ್ಲಿ ಉಪ ಖಜಾನೆ, ಐಸಿಡಿಎಸ್ಗೆ ಕನ್ನಡ ಮೇಲ್ವಿಚಾರಕ ಹುದ್ದೆ, ಪಿಎಸ್ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಭಾಷಾ ಅಲ್ಪಸಂಖ್ಯಾತ ಕೋಚಿಂಗ್ ಸೆಂಟರ್ ಆರಂಭಿಸಬೇಕು, ಕಚೇರಿ ನಾಮಫಲಕಗಳಲ್ಲಿ ಹೆಸರನ್ನು ಕನ್ನಡದಲ್ಲಿ ಪ್ರದರ್ಶಿಸಬೇಕು, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಶೀಕ್ಷಕರನ್ನೇ ನೇಮಕಾತಿ ನಡೆಸುವಂತೆ ಆಗ್ರಹಿಸಲಾಯಿತು.

