ಇನ್ನು ಮುಂದೆ ಗಡುವನ್ನು ವಿಸ್ತರಿಸಲಾಗದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ ಕೆಲ ದಿನಗಳ ಬಳಿಕ ಸಚಿವಾಲಯದಿಂದ ಈ ಕುರಿತ ನಿರ್ಧಾರ ಹೊರ ಬಂದಿದೆ.
'ಎಬಿಪಿಎಸ್ ವ್ಯವಸ್ಥೆಯ ಪ್ರಗತಿಯನ್ನು ಪರಿಶೀಲಿಸಲಾಯಿತು. ಬಳಿಕ ಎನ್ಎಸಿಎಚ್ ಮತ್ತು ಎಬಿಪಿಎಸ್ ಎರಡೂ ವ್ಯವಸ್ಥೆಯ (ಮಿಶ್ರ ಪಾವತಿ) ಮೂಲಕ ಕೂಲಿ ಪಾವತಿಸಲು ಡಿಸೆಂಬರ್ 31 ಅಥವಾ ಮುಂದಿನ ಆದೇಶದವರೆಗೆ ಅವಕಾಶ ಕಲ್ಪಿಸಲಾಗಿದೆ' ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ನರೇಗಾದಡಿ ಕೆಲಸ ಮಾಡುವವರಿಗೆ ಫೆಬ್ರುವರಿ 1ರಿಂದ ಕಡ್ಡಾಯವಾಗಿ ಎಬಿಪಿಎಸ್ ಮೂಲಕವೇ ಕೂಲಿ ಪಾವತಿಸಬೇಕು ಎಂದು ಸರ್ಕಾರ ಜನವರಿಯಲ್ಲಿ ಆದೇಶ ಹೊರಡಿಸಿತ್ತು. ಬಳಿಕ ಈ ಗಡುವು ಮಾರ್ಚ್ 31, ಜೂನ್ 30, ಬಳಿಕ ಆಗಸ್ಟ್ 31ರವರೆಗೆ ವಿಸ್ತರಣೆಯಾಗಿತ್ತು.
'ಗಡುವನ್ನು ವಿಸ್ತರಿಸದಿರಲು ಸರ್ಕಾರ ಈ ಹಿಂದೆ ನಿರ್ಧರಿಸಿತ್ತು. ಆದರೆ ಕಾರ್ಮಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಮಿಶ್ರ ವ್ಯವಸ್ಥೆ ಮೂಲಕ ಪಾವತಿಸುವ ದಿನಾಂಕವನ್ನು ಸರ್ಕಾರ ಪುನಃ ವಿಸ್ತರಿಸಿದೆ' ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಎಬಿಪಿಎಸ್ ವ್ಯವಸ್ಥೆಯಲ್ಲಿ ಕಾರ್ಮಿಕರ ಆಧಾರ್ ಸಂಖ್ಯೆಯು ಅವರ ಜಾಬ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯೊಂದಿಗೆ ಜೋಡಣೆಯಾಗಿರುತ್ತದೆ. ನರೇಗಾದ 14.33 ಕೋಟಿ ಸಕ್ರಿಯ ಫಲಾನುಭವಿಗಳ ಪೈಕಿ 13.97 ಕೋಟಿ ಜನರ ಆಧಾರ್ ಜೋಡಣೆಯಾಗಿದೆ. ಈ ಪೈಕಿ 13.34 ಕೋಟಿ ಜನರ ಆಧಾರ್ ದೃಢೀಕರಣವಾಗಿದ್ದು, ಶೇ 81.89 ರಷ್ಟು ಕಾರ್ಮಿಕರು ಎಬಿಪಿಎಸ್ಗೆ ಅರ್ಹರಾಗಿದ್ದಾರೆ.
ಎಬಿಪಿಎಸ್ ಡ್ಯಾಷ್ಬೋರ್ಡ್ ಮಾಹಿತಿ ಪ್ರಕಾರ ಕೇರಳ ರಾಜ್ಯ ಪ್ರಥಮ ಸ್ಥಾನದಲ್ಲಿದ್ದು, ಇಲ್ಲಿ ನರೇಗಾದ ಸಕ್ರಿಯ ಕಾರ್ಮಿಕರ ಪೈಕಿ ಶೇ 98ರಷ್ಟು ಜನರು ಎಬಿಪಿಎಸ್ಗೆ ಅರ್ಹರಾಗಿದ್ದಾರೆ. ನಂತರದ ಸ್ಥಾನದಲ್ಲಿ ಆಂಧ್ರ ಪ್ರದೇಶ, ತಮಿಳುನಾಡು, ಹಿಮಾಚಲ ಪ್ರದೇಶ ಮತ್ತು ತ್ರಿಪುರಾ ರಾಜ್ಯಗಳು ಇವೆ. ಮೇಘಾಲಯ ರಾಜ್ಯದಲ್ಲಿ ಕೇವಲ ಶೇ 3ರಷ್ಟು ಸಕ್ರಿಯ ಕಾರ್ಮಿಕರು ಮಾತ್ರ ಎಬಿಪಿಎಸ್ಗೆ ಅರ್ಹರಾಗಿದ್ದು, ಕೊನೆಯ ಸ್ಥಾನದಲ್ಲಿದೆ.