HEALTH TIPS

ಆರೆಸ್ಸೆಸ್‌ ಮುಖಂಡರ ಜತೆಗೆ ಬಾಂಧವ್ಯ, ಸಂಘದಿಂದ ಅಂತರ ಕಾಯ್ದುಕೊಂಡಿದ್ದ ಇಂದಿರಾ!

                    ವದೆಹಲಿ (PTI): 'ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಬಹುತೇಕ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಆದರೆ, ಸಂಘ ಮತ್ತು ತಮ್ಮ ನಡುವೆ ಎಚ್ಚರಿಕೆಯಿಂದ ಅಂತರವನ್ನೂ ಕಾಯ್ದುಕೊಂಡಿದ್ದರು...' ಎಂಬ ವಿಷಯ ಪತ್ರಕರ್ತೆ ನೀರಜಾ ಚೌಧರಿ ಅವರ ಕೃತಿಯಲ್ಲಿ ಬಹಿರಂಗಗೊಂಡಿದೆ.

                 'ಆರ್‌ಎಸ್‌ಎಸ್‌ ತಮ್ಮ ಸಹಾಯಕ್ಕೆ ಬಂದಾಗ ಅದನ್ನು ತಮ್ಮ ಉದ್ದೇಶಗಳಿಗೆ ಬಳಸಿಕೊಂಡಿದ್ದ ಇಂದಿರಾ, ಎಚ್ಚರಿಕೆಯಿಂದಲೇ ಸಂಘದಿಂದ ಅಂತರ ಕಾಯ್ದುಕೊಂಡಿದ್ದರು' ಎಂದು ನೀರಜಾ ಅವರು ತಮ್ಮ 'ಹೌ ಪ್ರೈಮ್ ಮಿನಿಸ್ಟರ್ ಡಿಸೈಡ್' ಕೃತಿಯಲ್ಲಿ ವಿವರಿಸಿದ್ದಾರೆ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆರ್‌ಎಸ್‌ಎಸ್, ಇಂದಿರಾ ಅವರ ಜತೆಗೆ ಸಂಧಾನಕ್ಕೆ ಮುಂದಾಗಿತ್ತು ಎಂಬುದನ್ನೂ ಕೃತಿ ಪ್ರತಿಪಾದಿಸಿದೆ.

               'ಆರ್‌ಎಸ್‌ಎಸ್ ಮುಖ್ಯಸ್ಥ ಬಾಳಾಸಾಹೇಬ್ ದೇವರಸ್ ಅವರು ಇಂದಿರಾ ಅವರಿಗೆ ಹಲವು ಬಾರಿ ಪತ್ರ ಬರೆದಿದ್ದರು. ಕೆಲ ಆರ್‌ಎಸ್‌ಎಸ್ ನಾಯಕರು ಕಪಿಲ್ ಮೋಹನ್ ಮೂಲಕ ಸಂಜಯ್ ಗಾಂಧಿ ಅವರನ್ನು ಸಂಪರ್ಕಿಸಿದ್ದರು. ಈ ಸಂದರ್ಭದಲ್ಲಿ ಎರಡೂ ಕಡೆ ಇಂದಿರಾ ಗಮನವಿರಿಸಬೇಕಾಗಿತ್ತು. ಬಲು ಸೂ‌ಕ್ಷ್ಮವಾಗಿ ಈ ಸನ್ನಿವೇಶವನ್ನು ಇಂದಿರಾ ನಿಭಾಯಿಸಿದ್ದರು' ಎಂದು ನೀರಜಾ ವಿವರಿಸಿದ್ದಾರೆ.

                 'ಮುಸ್ಲಿಮರಿಗೆ ಕಾಂಗ್ರೆಸ್ ಮೇಲಿದ್ದ ಅಸಮಾಧಾನವನ್ನು ಗ್ರಹಿಸಿದ್ದ ಇಂದಿರಾ, ತಮ್ಮ ತಟಸ್ಥ ನಿಲುವಿನ ಮೂಲಕ ಆರ್‌ಎಸ್‌ಎಸ್‌ ಸಹಾಯ ಪಡೆಯಬಹುದೆಂದು ಅಂದುಕೊಂಡಿದ್ದರು. ಆ ಮೂಲಕ ತಮ್ಮ ರಾಜಕಾರಣದಲ್ಲಿ ಹಿಂದುತ್ವವನ್ನು ತರಲು ಬಯಸಿದ್ದರು. 1980ರಲ್ಲಿ ಒಂದೆಡೆ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಅವರು ಜಾತ್ಯತೀತ ನಿಲುವಿನ ಇಮೇಜ್ ಪಡೆಯಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಇಂದಿರಾ ಗಾಂಧಿ ಕಾಂಗ್ರೆಸ್‌ ಅನ್ನು ಹಿಂದೂಕರಣ ಮಾಡಲು ಯತ್ನಿಸುತ್ತಿದ್ದರು' ಎಂದೂ ನೀರಜಾ ವಿಶ್ಲೇಷಿಸಿದ್ದಾರೆ.

                 '1980ರಲ್ಲಿ ಇಂದಿರಾ ಮತ್ತೆ ಅಧಿಕಾರಕ್ಕೆ ಬರಲು ಆರ್‌ಎಸ್‌ಎಸ್ ಸಹಾಯ ಮಾಡಿತು. ಆರ್‌ಎಸ್‌ಎಸ್ ತಮ್ಮನ್ನು ಬೆಂಬಲಿಸುತ್ತದೆ ಎಂಬುದು ಅವರಿಗೆ ತಿಳಿದಿತ್ತು. ಆದರೆ, ಅದನ್ನು ಅವರು ಎಂದಿಗೂ ಸಾರ್ವಜನಿಕವಾಗಿ ಒಪ್ಪಿಕೊಳ್ಳಲಿಲ್ಲ. ಆರ್‌ಎಸ್‌ಎಸ್‌ ಬೆಂಬಲ ದೊರೆಯದಿದ್ದರೆ ತಾನು 353 ಸ್ಥಾನಗಳನ್ನು ಗೆಲ್ಲುತ್ತಿರಲಿಲ್ಲ ಎಂಬುದನ್ನು ಖಾಸಗಿಯಾಗಿ ಒಪ್ಪಿಕೊಂಡಿದ್ದರು' ಎಂದು ಇಂದಿರಾ ಗಾಂಧಿ ಅವರ ಆಪ್ತರಾದ ಅನಿಲ್ ಬಾಲಿ ಅವರು ಹೇಳಿದ್ದಾರೆ.


               'ಆರ್‌ಎಸ್‌ಎಸ್‌ನ ಮುಖ್ಯಸ್ಥ ಬಾಳಾ ಸಾಹೇಬ್ ದೇವರಸ್ ಅವರು ಕಾರ್ಯಕ್ರಮವೊಂದರಲ್ಲಿ 'ಇಂದಿರಾ ಗಾಂಧಿ ಬಹುದೊಡ್ಡ ಹಿಂದೂ (ಇಂದಿರಾ ಗಾಂಧಿ ಬಹುತ್ ಬಡೀ ಹಿಂದೂ ಹೈ)' ಎನ್ನುವ ಹೇಳಿಕೆಯನ್ನೂ ಕೊಟ್ಟಿದ್ದರು. ಅಷ್ಟೇ ಅಲ್ಲ, ಬಾಳಾಸಾಹೇಬ್ ಮತ್ತು ಅವರ ಸಹೋದರ ಇಂದಿರಾ ಗಾಂಧಿ ಅವರಲ್ಲಿ ಹಿಂದೂಗಳ ಸಂಭಾವ್ಯ ನಾಯಕಿಯನ್ನೂ ಕಂಡಿದ್ದರು' ಎಂದೂ ಬಾಲಿ ಹೇಳಿದ್ದಾರೆ.

               '1971ರಲ್ಲಿ ಬಾಂಗ್ಲಾದೇಶದಿಂದ ದೂರ ಸರಿದು, ಪಾಕಿಸ್ತಾನವನ್ನು ದುರ್ಬಲಗೊಳಿಸಿದ್ದಕ್ಕಾಗಿ ಇಂದಿರಾ ಅವರನ್ನು ಆರ್‌ಎಸ್‌ಎಸ್‌ ಹೊಗಳಿತ್ತು. ಆರ್‌ಎಸ್‌ಎಸ್‌ ಮುಖಂಡ ಮಾಧವ್ ಸದಾಶಿವ್ ಗೋಳವಲಕರ್‌ (ಗುರೂಜಿ) ಅವರು ಇಂದಿರಾ ಅವರಿಗೆ ಪತ್ರ ಬರೆದು, 'ಈ ಬಹುದೊಡ್ಡ ಸಾಧನೆಯ ಶ್ರೇಯಸ್ಸು ನಿಮಗೆ ಸಲ್ಲುತ್ತದೆ' ಎಂದು ಮೆಚ್ಚುಗೆ ಸೂಚಿಸಿದ್ದರು. ಅಷ್ಟೇ ಅಲ್ಲ, 1974ರಲ್ಲಿ ಪರಮಾಣು ಪರೀಕ್ಷೆಯನ್ನು ನಡೆಸಿ ಇಂದಿರಾ ಆರ್‌ಎಸ್‌ಎಸ್‌ನ ಮೆಚ್ಚುಗೆಗೆ ಪಾತ್ರವಾಗಿದ್ದರು. ಏಕೆಂದರೆ ಆರ್‌ಎಸ್‌ಎಸ್ ಎಂದಿಗೂ ಮಿಲಿಟರಿ ಸಾಮರ್ಥ್ಯ ಹೊಂದಿದ್ದ ಬಲಿಷ್ಠ ಭಾರತವನ್ನು ಬಯಸುತ್ತಿತ್ತು' ಎಂಬ ವಿಷಯವೂ ಕೃತಿಯಲ್ಲಿದೆ.

ದೇಶದ ವಿವಿಧ ಪ್ರಧಾನಿಗಳ ಕಾರ್ಯವೈಖರಿಯನ್ನು ವಿಶ್ಲೇಷಿಸಿರುವ ಈ ಕೃತಿಯಲ್ಲಿ, 1980ರ ತುರ್ತು ಪರಿಸ್ಥಿತಿಯ ಬಳಿಕ ಇಂದಿರಾ ಗಾಂಧಿ ಅವರು ಶಾ ಬಾನೊ ಪ್ರಕರಣದ ಮೂಲಕ ಹೇಗೆ ಮರಳಿ ಅಧಿಕಾರದ ಗದ್ದುಗೆ ಏರಿದರು. ಮಂಡಲ್ ಕಮಿಷನ್, ಬಾಬರಿ ಮಸೀದಿ ಘಟನೆ ಕುರಿತು ವಿಶ್ಲೇಷಣೆ, ಪರಮಾಣು ಪರೀಕ್ಷೆಗಳಿಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಒಪ್ಪಿಗೆ, ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ನಡೆದ ಭಾರತ- ಅಮೆರಿಕ ನಡುವಣ ಪರಮಾಣು ಒಪ್ಪಂದ... ಹೀಗೆ ಅನೇಕ ವಿಷಯಗಳ ಕುರಿತು ಆಳವಾದ ಒಳನೋಟ ಬೀರಲಾಗಿದೆ.

                 ಶೀಘ್ರದಲ್ಲೇ ಬಿಡುಗಡೆಯಾಗಲಿರುವ 'ಹೌ ಪ್ರೈಮ್ ಮಿನಿಸ್ಟರ್ ಡಿಸೈಡ್' ಕೃತಿಯನ್ನು ಅಲೆಫ್‌ ಬುಕ್ ಕಂಪೆನಿ ಪ್ರಕಾಶನ ಪ್ರಕಟಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries