ಬದಿಯಡ್ಕ: ಸದಾಚಾರ ಸತ್ಕರ್ಮಗಳನ್ನು ಮೈಗೂಡಿಸಿಕೊಂಡು ನೂರು ವರ್ಷಗಳ ಸಂತೃಪ್ತ ಜೀವನವನ್ನು ಪೂರೈಸುತ್ತಿರುವ ಕೋಟೆಕಾರು ಬಾಬು ರೈ ಅವರ ಜತೆ ಉಸಿರಾಡುತ್ತಿರುವುದು ನಮ್ಮ ಭಾಗ್ಯ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಹೇಳಿದರು.
ಅವರು ವಿದ್ವಾನ್ ಬಾಬು ರೈ ಜನ್ಮ ಶತಮಾನೋತ್ಸವ ಸಮಿತಿಯ ನೇತೃತ್ವದಲ್ಲಿ ಎಡನೀರು ಮಠದಲ್ಲಿ ಮಂಗಳವಾರ ಸಂಜೆ ಜರಗಿದ ವಿದ್ವಾನ್ ಕೆ.ಬಾಬು ರೈ ಜನ್ಮ ಶತಮಾನೋತ್ಸವ ಸಂಭ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗೆ ಅರ್ಹತೆ ಹೊಂದಿರುವ ಬಾಬು ರೈ ಅವರು ಯಾವುದೇ ಪ್ರಶಸ್ತಿಗಳ ಹಿಂದೆ ಬೀಳದೆ ಇದ್ದುದರಿಂದ ಸರ್ಕಾರಗಳು ನೀಡುವ ಗೌರವದಿಂದ ವಂಚಿತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಸÀರ್ಕಾರ ಇವರನ್ನು ಗುರುತಿಸುವಂತಾಗಲಿ ಎಂದು ಹೇಳಿದರು.
ಜನ್ಮಶತಮಾನೋತ್ಸವ ಸಮಿತಿಯ ಅಧ್ಯಕ್ಷ ರಾಮ್ಪ್ರಸಾದ್ ಕಾಸರಗೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಅಭಿನಂದನಾ ಭಾಷಣ ಮಾಡಿದರು. ಕಾಸರಗೋಡು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಬಾಬು ರೈ ಅವರ ವ್ಯಕ್ತಿತ್ವ ಸಾಧನೆಯನ್ನು ಪರಿಚಯಿಸಿದರು. ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜನ್ಮಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ, ಕಾಸರಗೋಡು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಕೆ.ಸುಬ್ಬಣ್ಣ ಶೆಟ್ಟಿ, ಉಡುಪಿ ಯಕ್ಷಗಾನ ಕಲಾರಂಗದ ತಲ್ಲೂರು ಶಿವರಾಮ ಶೆಟ್ಟಿ, ಮುರಳಿ ಕಡೆಕಾರು ಮೊದಲಾದವರು ಮಾತನಾಡಿದರು.
ಶತಾಯುಷಿ ಕೆ.ಬಾಬು ರೈ ಅವರಿಗೆ ಸ್ಮರಣಿಕೆ, ಫಲಪುಷ್ಪ, ಒಂದು ಲಕ್ಷ ರೂ. ನಗದು ನೀಡಿ ಸ್ವಾಮೀಜಿಯವರು ಗೌರವಿಸಿದರು. ಕೆ.ಜಗದೀಶ್ ಕೂಡ್ಲು ಅಭಿನಂದನಾ ಪತ್ರ ವಾಚಿಸಿದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾರಂಗ ಉಡುಪಿ ಇವರ ನೇತೃತ್ವದಲ್ಲಿ 40 ಸಾವಿರ ರೂ. ನಗದು ಸಹಿತ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದಭರ್Àದಲ್ಲಿ ಕಾಸರಗೋಡಿನ ಶ್ರೀ ಪುರಂದರದಾಸ ಸಂಗೀತ ಕಲಾಮಂದಿರ, ಗೋಪಾಲಕೃಷ್ಣ ಸಂಗೀತ ಶಾಲೆ ವಿದ್ಯಾನಗರ, ವಿಜಯ ಸಂಗೀತ ಪ್ರತಿಷ್ಠಾನ ತಾಳಿಪಡ್ಪು, ಸರಸ್ವತಿ ಸಂಗೀತ ವಿದ್ಯಾಲಯ ಕಾವು ಮಠ ಇವರಿಂದ ಬಾಬು ರೈ ಅವರಿಗೆ ಸಂಗೀತಾರ್ಚನೆ ನಡೆಯಿತು. ಪ್ರಧಾನ ಕಾರ್ಯದರ್ಶಿ ಶಿವರಾಮ ಕಾಸರಗೋಡು ಸ್ವಾಗತಿಸಿ, ಕೋಶಾಧಿಕಾರಿ ಶಶಿಧರ ಶೆಟ್ಟಿ ವಂದಿಸಿದರು. ಪತ್ರಕರ್ತ ವೀಜಿ ಕಾಸರಗೋಡು, ಅಶೋಕ್ ರೈ, ಗುರುಪ್ರಸಾದ್ ಕೋಟೆಕಣಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ವಾನ್ ಕುಮರೇಶ್ ರಾಜಗೋಪಾಲನ್ ಅವರಿಂದ ವಯಲಿನ್ ಸಂಧ್ಯಾ ವಿಶೇಷ ಸಂಗೀತ ಕಾರ್ಯಕ್ರಮ ಜರಗಿತು. ತುಮಕೂರು ರವಿಶಂಕರ್(ಮೃದಂಗ), ತಿರುಚ್ಚಿ ಕೃಷ್ಣ ಸ್ವಾಮಿ(ಘಟಂ) ಸಹಕರಿಸಿದರು.




.jpg)
