ಕಾಸರಗೋಡು: ಕೇರಳ ಸರ್ಕಾರ ಅತಿವೇಗ ರೈಲು ಯೋಜನೆ(ಸಿಲ್ವರ್ ಲೈನ್) ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸುವ ಮಧ್ಯೆ ಕೇಂದ್ರದ ಎನ್ಡಿಎ ಸರ್ಕಾರ ಕೇರಳಕ್ಕೆ ಎರಡು ವಂದೇ ಭಾರತ್ ರೈಲು ಮಂಜೂರುಗೊಳಿಸುವ ಮೂಲಕ ರಾಜ್ಯದ ಜನತೆಯನ್ನು ಹುಬ್ಬೇರಿಸುವಂತೆ ಮಾಡಿದೆ. ಹಲವು ತಾಸುಗಳ ರೈಲು ಸಂಚಾರದಿಂದ ಬೇಸತ್ತಿದ್ದ ಜನತೆ ಸ್ವಂತ ವಾಹನಗಳಲ್ಲಿ ಸಂಚರಿಸುತ್ತಿದ್ದವರೆಲ್ಲರೂ ವಂದೇಭಾರತ್ಗೆ ತಮ್ಮ ಪ್ರಯಾಣವನ್ನು ಬದಲಾಯಿಸಿಕೊಂಡಿದ್ದಾರೆ. ಟ್ರಾಫಿಕ ದಟ್ಟಣೆಯಿಂದ ಬೇಸತ್ತಿದ್ದ ಜನತೆಗೆ ವಂದೇಭಾರತ್ ವರದಾನವಾಗಿ ಪರಿಣಮಿಸಿದೆ. ವಿಮಾನದಲ್ಲಿ ಸಂಚರಿಸುವವರೂ ವಂದೇ ಭಾರತ್ ರೈಲನ್ನು ಆಶ್ರಯಿಸುತ್ತಿದ್ದಾರೆ. ವಿಮಾನಪ್ರಯಾಣಕ್ಕೆ ಕನಿಷ್ಠ ಒಂದು ತಾಸು ಮುಂಚಿತವಾಗಿ ನಿಲ್ದಾಣ ತಲುಪಬೇಕು. ಅದೂ ಟ್ರಾಫಿಕ್ ದಟ್ಟಣೆಯಿದ್ದರೆ, ಮತ್ತೆ ಒಂದು ತಾಸು ವಿಳಂಬವಾಗುತ್ತಿದ್ದು, ವಂದೇಭಾರತ್ ರೈಲು ಪ್ರಯಾಣ ಇದನ್ನು ಮೀರಿ ನಿಂತಿದೆ ಎಂಬುದಾಘಿ ರೈಲ್ವೆ ಪ್ರಯಾಣಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಂದೇಭಾರತ್ ಆರಂಭಗೊಳ್ಳುವ ಸಂದರ್ಭ ಇಷ್ಟೊಂದು ಹಣ ತೆತ್ತು ಯಾರೂ ಈ ರೈಲನ್ನೇರುವುದಿಲ್ಲ ಎಂದು ಪ್ರಚಾರ ನಡೆಸಿದವರು, ವಂದೇಭಾರತ್ ಎಕ್ಸ್ಪ್ರೆಸ್ ರೈಲಿನ ಯಶಸ್ಸಿನಿಂದ ಬೆರಗಾಗಿದ್ದಾರೆ. ಎರಡನೇ ವಂದೇಭಾರತ್ ರೈಲು ಭಾನುವಾರ ಉದ್ಘಾಟನೆಗೊಂಡಿದ್ದು, ಸೆ. 26ರಂದು ಕಾಸರಗೋಡಿನಿಂದ ಸಂಚಾರ ಆರಂಭಿಸಲಿದೆ. ಭಾನುವಾರ ಕಾಸರಗೋಡಿನಿಂದ ತಿರುವನಂತಪುರ ವರೆಗೆ ಪ್ರಯಾಣ ಬೆಳೆಸಿರುವ ರೈಲನ್ನು ಪ್ರತಿ ನಿಲ್ದಾಣಗಳಲ್ಲಿ ಭಾರಿ ಜನಸ್ತೋಮದೊಂದಿಗೆ ಸ್ವಾಗತಿಸಲಾಗಿತ್ತು. ನಿಲ್ದಾಣಗಳಲ್ಲಿ ಚೆಂಡೆಮೇಳದೊಂದಿಗೆ ಸಿಹಿ ಹಂಚಿ, ರೈಲಿನೆದುರು ಸೆಲ್ಫಿ ತೆಗೆಸಿಕೊಂಡು ಸಂಭ್ರಮಪಟ್ಟರು.
ಕಾಞಂಗಾಡಿನಲ್ಲಿ ನಿಲುಗಡೆ?:
ತಿರುವನಂತಪುರದಿಂದ ಕಾಸರಗೋಡಿಗೆ ಆಗಮಿಸುವ ಎರಡನೇ ವಂದೇಭಾರತ್ ರೈಲಿಗೆ ಕಾಞಂಗಾಡಿನಲ್ಲಿ ನಿಲುಗಡೆ ಮಂಜೂರುಗೊಳಿಸುವ ಬಗ್ಗೆ ಕೇಂದ್ರ ಸಚಿವ ವಿ.ಮುರಳೀಧರನ್ ಪಾಲಕ್ಕಾಡ್ ರೈಲ್ವೆ ವಿಭಾಗೀಯ ಪ್ರಬಂಧಕರ ಜತೆ ಮಾತುಕತೆ ನಡೆಸಿದ್ದು, ನಿಲುಗಡೆ ಮಂಜೂರಾಗಿ ಲಭಿಸುವ ಸಾಧ್ಯತೆಯಿದೆ. ಕಾಞಂಗಾಡ್ ಡೆವೆಲಪ್ಮೆಮಟ್ ಬೋರ್ಡ್ ಪದಾಧಿಕಾರಿಗಳು ಈ ಬಗ್ಗೆ ಸಚಿವ ವಿ. ಮುರಳೀಧರನ್ ಅವರಿಗೆ ಮನವಿ ಸಲ್ಲಿಸಿದ್ದರು.
ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಉತ್ತರ ಮಲಬಾರಿಗೆ ರೈಲ್ವೆ ಇಲಾಖೆಯಲ್ಲಿ ತುರ್ತಾಗಿ ನಡೆಯಬೇಕಾಗಿರುವ ಪ್ರಮುಖ ಕೆಲಸಗಳ ಬಗ್ಗೆ ಕಾಸರಗೋಡು ಪ್ಯಾಸೆಂಜರ್ಸ್ ಅಸೋಸಿಯೇಶನ್ ವತಿಯಿಂದ ಕೇಂದ್ರ ಸಚಿವ ವಿ. ಮುರಳೀಧರನ್ ಅವರಿಗೆ ಅಸೋಸಿಯೇಶನ್ ಪದಾಧಿಕಾರಿಗಳು ಮನವಿ ಸಲ್ಲಿಸಿ ಗಮನಸೆಳೆದರು.


