ಪಿಂಡದಾನ ಮಾಡುವಾಗ ಕಾಗೆಗಳಿಗೆ ಆಹಾರ ನೀಡುತ್ತೇವೆ. ಕಾಗೆಗೂ -ಪೂರ್ವಜರಿಗೂ ಇರುವ ಸಂಬಂಧವೇನು? ಏಕೆ ಕಾಗೆಗಳಿಗೆ ಆಹಾರ ನೀಡಬೇಕು? ಇದರ ಹಿಂದಿರುವ ಕಾರಣವೇನು ನೋಡೋಣ ಬನ್ನಿ:
ಪಿತೃಪಕ್ಷದಲ್ಲಿ ಕಾಗೆಗಳಿಗೆ ಆಹಾರ ನೀಡುವುದರ ಮಹತ್ವವೇನು?
ಸೆಪ್ಟೆಂಬರ್ 29ರಿಂದ ಪಿತೃಪಕ್ಷ ಶುರುವಾಗಿದೆ. ಹಿಂದೂ ಧರ್ಮದಲ್ಲಿ ಪಿತೃಪಕ್ಷಕ್ಕೆ ತುಂಬಾನೇ ಮಹತ್ವವಿದೆ. ನಾವು ಸರಿಯಾದ ಕ್ರಮದಲ್ಲಿ ಶ್ರಾದ್ಧ ಕಾರ್ಯ ಮಾಡದಿದ್ದರೆ ನಮ್ಮ ಪೂರ್ವಜರಿಗೆ ಮೋಕ್ಷ ಸಿಗುವುದಿಲ್ಲ. ಅವರಿಗೆ ಮೋಕ್ಷ ಸಿಗದಿದ್ದರೆ ನಮಗೆ ಒಳಿತಾಗುವುದಿಲ್ಲ ಎಂಬ ನಂಬಿಕೆಯಿದೆ
ಪೂರ್ವಜರಿಗೆ ಮೋಕ್ಷ ಸಿಗದಿದ್ದರೆ ಪಿತೃದೋಷ ಉಂಟಾಗುವುದು
ಪೂರ್ವಜರ ಆತ್ಮ ಮೋಕ್ಷ ಸಿಗದೆ ಅಲೆಯುತ್ತಿದ್ದರೆ ಅದರಿಂದ ನಮಗೆ ಒಳಿತಾಗಲ್ಲ ಎಂದು ನಂಬಲಾಗಿದೆ. ನಮ್ಮ ದೇಹದಿಂದ ಆತ್ಮ ಹೊರಡು ಹೋದಾಗ ನಮ್ಮ ಪ್ರಾಣ ಹೋಗುತ್ತದೆ. ಈ ಆತ್ಮ ಅಲೆದಾಡುತ್ತಿರುತ್ತದೆ. ಅದಕ್ಕೆ ಸರಿಯಾದ ಕ್ರಮದ ಮೂಲಕ ಆತ್ಮಕ್ಕೆ ಮೋಕ್ಷ ಕೊಡಿಸಬೇಕು, ಇಲ್ಲದಿದ್ದರೆ ಅತೃಪ್ತ ಆತ್ಮಗಳಾಗಿ ಅಲೆಯುತ್ತವೆ, ಇದರಿಂದ ಮನೆಗೆ ತೊಂದರೆ ಉಂಟಾಗುವುದು ಎಂದು ಹೇಳಲಾಗುವುದು. ಕೆಲಸದಲ್ಲಿ ಅಡೆತಡೆಗಳು ಉಂಟಾಗುವುದು, ಸಂತಾನ ಭಾಗ್ಯ ಇರಲ್ಲ, ಆರೋಗ್ಯ ಸಮಸ್ಯೆಗಳು ಕಂಡು ಬರುವುದು, ಮನೆಯಲ್ಲಿ ನೆಮ್ಮದಿ ಇಲ್ಲದಂತಾಗುವುದು. ಆದ್ದರಿಂದ ಶ್ರಾದ್ಧ ಕಾರ್ಯ ಮಾಡುವ ಮೂಲಕ ಮರಣವೊಂದಿದವರ ಆತ್ಮಕ್ಕೆ ಮೋಕ್ಷವನ್ನು ನೀಡಲಾಗುವುದು.
ಆತ್ಮಗಳಿಗೆ ಮೋಕ್ಷ ಪಿತೃಪಕ್ಷ ಅತ್ಯುತ್ತಮವಾದ ಸಮಯ
ಶ್ರಾದ್ಧ ಕಾರ್ಯಗಳನ್ನು ಕೆಲವೊಂದು ದಿನಗಳಲ್ಲಿ ಮಾಡಿದರೆ ಒಳ್ಳೆಯದು ಎಂದು ನಂಬಲಾಗಿದೆ. ಪಿತೃ ತರ್ಪಣ ಕಾರ್ಯಗಳನ್ನು ಪಿತೃಕ್ಷದಲ್ಲಿ ಹೆಚ್ಚಾಗಿ ಮಾಡಲಾಗುವುದು. ಪಿತೃ ಪಕ್ಷ ಎಂಬುವುದು 16 ದಿನಗಳ ಆಚರಣೆಯಾಗಿದೆ. ಈ ಆಚರಣೆಯಲ್ಲಿ ಕಾಗೆಗಳನ್ನು ನಮ್ಮ ಪೂರ್ವಜರು ಎಂದು ಭಾವಿಸುತ್ತೇವೆ. ಹಿರಿಯರು ಕಾಗೆಗಳ ರೂಪದಲ್ಲಿ ಬಂದು ಪಿಂಡವನ್ನು ಸ್ವೀಕರಿಸುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಕಾಗೆಗಳಿಗೆ ಶ್ರಾದ್ಧ ಮಾಡುವಾಗ ಆಹಾರ ಇಡಲಾಗುವುದು.
ಗರುಡ ಪುರಾಣ ಏನು ಹೇಳುತ್ತದೆ?
ಗರುಡ ಪುರಾಣದಲ್ಲಿ ಕಾಗೆ ಯಮಧರ್ಮನ ಸಂದೇಶಕಾರ ಎಂದು ಹೇಳಲಾಗಿದೆ. ಕಾಗೆ ಬಂದು ಶ್ರಾದ್ಧಕ್ಕೆ ಇಟ್ಟ ಆಹಾರ ಸೇವಿಸಿದರೆ ಹಿರಿಯರೇ ಬಂದು ಅದನ್ನು ಸ್ವೀಕರಿಸಿದ್ದಾರೆ ಎಂದು ನಂಬಲಾಗಿದೆ.
ಕಾಗೆ ಶನಿಯ ವಾಹನ
ಶನಿಯ ವಾಹನವಾಗಿರುವ ಕಾಗೆಗೆ ಆಹಾರವನ್ನು ದಾನ ಮಾಡುವುದರಿಂದ ಪಿತೃದೋಷ ನಿವಾರಣೆಯಾಗುವುದು ಎಂಬ ನಂಬಿಕೆಯಲ್ಲಿ ಕಾಗೆಗಳಿಗೆ ಆಹಾರವನ್ನು ನೀಡಲಾಗುವುದು.