ಎರ್ನಾಕುಳಂ: ಶಾಲೆಗಳ ಮಧ್ಯಾಹ್ನದ ಊಟದ ಯೋಜನೆಯನ್ನು ನಡೆಸುವಲ್ಲಿ ರಾಜ್ಯ ಸರ್ಕಾರವು ದುರಾಡಳಿತ ನಡೆಸುತ್ತಿದೆ ಎಂದು ಹೈಕೋರ್ಟ್ ಟೀಕಿಸಿದೆ.
ಅತಿಯಾದ ಹೊರೆ ಎನಿಸಿದರೆ ಯೋಜನೆಯನ್ನು ನಿಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಹೇಳಿದೆ.
‘ಮಧ್ಯಾಹ್ನ ಊಟದ ಯೋಜನೆಗೆ ತಗಲುವ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಲಿ, ಇಲ್ಲವೇ ಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಬಿಟ್ಟುಕೊಟ್ಟು ದೂರ ಉಳಿಯಲಿ’ ಎಂದು ನ್ಯಾಯಾಲಯ ಸೂಚಿಸಿದೆ. ನ್ಯಾಯಮೂರ್ತಿ ಟಿ.ಆರ್.ರವಿಕುಮಾರ್ ಈ ಟೀಕೆಮಾಡಿ ಸರ್ಕಾರದ ಕಿವಿಹಿಂಡಿರುವರು.
ಕೇಂದ್ರದ ಅನುದಾನ ಸಿಗದಿದ್ದರೆ ಮೊತ್ತ ನೀಡುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದೆ. 2012ರ ಸರ್ಕಾರಿ ಆದೇಶದ ಪ್ರಕಾರ ಮುಖ್ಯ ಶಿಕ್ಷಕರಿಗೆ ಮುಂಗಡ ಹಣ ಪಾವತಿ ಮಾಡಬೇಕು. ಇದನ್ನು ಸರ್ಕಾರ ಬಜೆಟ್ನಲ್ಲಿ ನಿಗದಿಪಡಿಸಿದ ಮೊತ್ತದಿಂದ ಪಾವತಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಮುಂದಿನ ಸೋಮವಾರ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮತ್ತೊಮ್ಮೆ ನಡೆಸಲಿದೆ.