ನವದೆಹಲಿ: ವ್ಯಕ್ತಿಗಳು, ವಿಶೇಷವಾಗಿ ಮಾಧ್ಯಮ ಪ್ರತಿನಿಧಿಗಳ ಫೋನ್ಗಳು, ಲ್ಯಾಪ್ಟಾಪ್ಗಳು ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳನ್ನು ಜಪ್ತಿ ಮಾಡುವುದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚಿಸಿದೆ.
ಈ ವಿಷಯ ಗಂಭೀರವಾದುದು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಕೇಂದ್ರದ ತನಿಖಾ ಸಂಸ್ಥೆಗಳಿಗೆ ಪರಮಾಧಿಕಾರ ನೀಡಿರುವುದು ಕಳವಳಕಾರಿ ಎಂದಿದೆ.
'ಫೌಂಡೇಷನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್' ಹಾಗೂ ಇತರರು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಸಂಜಯಕಿಶನ್ ಕೌಲ್ ಹಾಗೂ ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
'ಎಲ್ಲ ಅಧಿಕಾರವನ್ನು ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ನೀಡಿರುವುದನ್ನು ಒಪ್ಪುವುದು ಕಷ್ಟ. ಇದು ಅಪಾಯಕಾರಿ ಎಂಬುದು ನನ್ನ ಅನಿಸಿಕೆ' ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರನ್ನು ಉದ್ದೇಶಿಸಿ ನ್ಯಾಯಮೂರ್ತಿ ಕೌಲ್ ಹೇಳಿದರು.
ಅರ್ಜಿದಾರರೊಬ್ಬರ ಪರ ಹಾಜರಿದ್ದ ವಕೀಲರು, 'ಎಲೆಕ್ಟ್ರಾನಿಕ್ ಸಾಧನಗಳನ್ನು ಯಾವಾಗ ಮತ್ತು ಹೇಗೆ ಜಪ್ತಿ ಮಾಡಬೇಕು ಎಂಬುದರ ಬಗ್ಗೆ ಮಾರ್ಗಸೂಚಿಗಳೇ ಇಲ್ಲ' ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಜು, 'ಈ ವಿಷಯವನ್ನು ಹಲವಾರು ಸಂಕೀರ್ಣ ಕಾನೂನು ಅಂಶಗಳನ್ನು ಒಳಗೊಂಡಿರುವ ಕಾರಣ ಪ್ರತಿಕ್ರಿಯ ನೀಡಲು ಸಮಯಾವಕಾಶ ಬೇಕು' ಎಂದು ತಿಳಿಸಿದರು.
'ಪದೇಪದೇ ಅಪರಾಧ ಕೃತ್ಯಗಳನ್ನು ಎಸಗುವವರು ಅಥವಾ ದೇಶ ವಿರೋಧಿ ಶಕ್ತಿಗಳು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಮಹತ್ವದ ದತ್ತಾಂಶಗಳನ್ನು ಮುಚ್ಚಿಟ್ಟಿರುತ್ತಾರೆ. ಹೀಗಾಗಿ, ಇಂಥ ಸಾಧನಗಳನ್ನು ಜಪ್ತಿ ಮಾಡುವುದು ಅಗತ್ಯವಾಗುತ್ತದೆ' ಎಂದು ಎಸ್.ವಿ.ರಾಜು, ನ್ಯಾಯಪೀಠಕ್ಕೆ ತಿಳಿಸಿದರು.
'ಇಲ್ಲಿ ಸಮಸ್ಯೆ ಏನೆಂದರೆ, ಹಲವು ಮಾಧ್ಯಮ ಪ್ರತಿನಿಧಿಗಳು ಸುದ್ದಿಗಳಿಗೆ ಸಂಬಂಧಿಸಿ ತಮ್ಮದೇ ಆದ ಮೂಲಗಳನ್ನು ಹೊಂದಿರುತ್ತಾರೆ. ಹೀಗಾಗಿ ಅವರ ಸಾಧನಗಳನ್ನು ಜಪ್ತಿ ಮಾಡುವುದು ಗಂಭೀರ ವಿಷಯ' ಎಂದು ಹೇಳಿದ ನ್ಯಾಯಪೀಠ, 'ಎಲ್ಲ ಸಾಧನಗಳನ್ನು ನೀವು ವಶಕ್ಕೆ ಪಡೆದರೆ ಸಮಸ್ಯೆಯಾಗುತ್ತದೆ' ಎಂದ ನ್ಯಾಯಪೀಠ, ಈ ಕುರಿತು ಮಾರ್ಗಸೂಚಿಗಳನ್ನು ರಚಿಸಲೇಬೇಕು ಎಂದಿತು.
'ಎರಡೂ ಪಕ್ಷದವರ ಹಿತಾಸಕ್ತಿ ರಕ್ಷಣೆಯಾಗಬೇಕು. ಯಾವುದೇ ದುಷ್ಪರಿಣಾಮವೂ ಉಂಟಾಗಬಾರದು. ಹೀಗಾಗಿ, ಯಾವ ರೀತಿಯ ಮಾರ್ಗಸೂಚಿಗಳಿರಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರ ವಿಶ್ಲೇಷಣೆ ನಡೆಸಬೇಕು' ಎಂದು ಹೇಳಿದ ನ್ಯಾಯಪೀಠ, ವಿಚಾರಣೆಯನ್ನು ಡಿಸೆಂಬರ್ಗೆ ಮುಂದೂಡಿತು.