ಜೈಪುರ: 'ಜಲ ಜೀವನ್ ಮಿಷನ್' ಯೋಜನೆಯಡಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನದ ವಿವಿಧೆಡೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ಶೋಧ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
0
samarasasudhi
ನವೆಂಬರ್ 04, 2023
ಜೈಪುರ: 'ಜಲ ಜೀವನ್ ಮಿಷನ್' ಯೋಜನೆಯಡಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನದ ವಿವಿಧೆಡೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ಶೋಧ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜೈಪುರ ಮತ್ತು ದೌಸಾ ಸೇರಿದಂತೆ 25 ಕಡೆಗಳಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸಿದರು.
ರಾಜಸ್ಥಾನ ವಿಧಾನಸಭೆಯ 200 ಕ್ಷೇತ್ರಗಳಿಗೆ ನವೆಂಬರ್ 25ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ಮುನ್ನ ನಡೆದಿರುವ ಈ ದಾಳಿಯು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹಲೋತ್ ಅವರು, 'ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಳ್ಳಲು ಬಿಜೆಪಿ ಸರ್ಕಾರದ ನಿರ್ದೇಶನದ ಮೇರೆಗೆ ಕೇಂದ್ರದ ತನಿಖಾ ತಂಡಗಳು ಕೆಲಸ ಮಾಡುತ್ತಿವೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಏನಿದು ಪ್ರಕರಣ?
ಸಾರ್ವಜನಿಕ ಆರೋಗ್ಯ ಮತ್ತು ಎಂಜಿನಿಯರಿಂಗ್ ಇಲಾಖೆಯ ಗುತ್ತಿಗೆಗಳನ್ನು ಅಕ್ರಮವಾಗಿ ಪಡೆಯಲು, ತಾವು ಗುತ್ತಿಗೆ ಪಡೆದು ಪೂರ್ಣಗೊಳಿಸಿದ ಕೆಲಸಗಳಿಗೆ ಬಿಲ್ ಮಂಜೂರು ಮಾಡಿಸಿಕೊಳ್ಳಲು ಹಾಗೂ ಅಕ್ರಮಗಳು ಬಯಲಾಗದಂತೆ ಮುಚ್ಚಿಡಲು ಶ್ರೀ ಶ್ಯಾಮ್ ಟ್ಯೂಬ್ವೆಲ್ ಕಂಪನಿ ಮಾಲೀಕ ಪದಮ್ ಚಂದ್ ಜೈನ್ ಹಾಗೂ ಶ್ರೀ ಗಣಪತಿ ಟ್ಯೂಬ್ವೆಲ್ ಕಂಪನಿಯ ಮಾಲೀಕ ಮಹೇಶ್ ಮಿತ್ತಲ್ ಸೇರಿದಂತೆ ಇತರರು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂಬುದು ಆರೋಪ. ಆದರೆ, ಈ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ನಡೆದಿದೆ ಎಂಬುದನ್ನು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ ಅಲ್ಲಗಳೆದಿತ್ತು.