ನವದೆಹಲಿ: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳನ್ನು (ಇಎಸ್ಎ) ಅಧಿಕೃತವಾಗಿ ಗುರುತಿಸುವ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸಲು ಹೊಸದಾಗಿ ರಚಿಸಲಾಗಿರುವ ಸಮಿತಿಯ ವರದಿಗಾಗಿ ಸರ್ಕಾರ ಕಾಯುತ್ತಿದೆ ಎಂದು ಪರಿಸರ ಸಚಿವ ಭೂಪೇಂದರ್ ಯಾದವ್ ಗುರುವಾರ ರಾಜ್ಯಸಭೆಗೆ ತಿಳಿಸಿದರು.
0
samarasasudhi
ಡಿಸೆಂಬರ್ 08, 2023
ನವದೆಹಲಿ: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳನ್ನು (ಇಎಸ್ಎ) ಅಧಿಕೃತವಾಗಿ ಗುರುತಿಸುವ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸಲು ಹೊಸದಾಗಿ ರಚಿಸಲಾಗಿರುವ ಸಮಿತಿಯ ವರದಿಗಾಗಿ ಸರ್ಕಾರ ಕಾಯುತ್ತಿದೆ ಎಂದು ಪರಿಸರ ಸಚಿವ ಭೂಪೇಂದರ್ ಯಾದವ್ ಗುರುವಾರ ರಾಜ್ಯಸಭೆಗೆ ತಿಳಿಸಿದರು.
ಕೇಂದ್ರ ಪರಿಸರ ಸಚಿವಾಲಯವು ಕಸ್ತೂರಿ ರಂಗನ್ ಸಮಿತಿಯ ವರದಿ ಆಧರಿಸಿ 2014ರಲ್ಲಿ ಇಎಸ್ಎಗಳನ್ನು ಗುರುತಿಸುವ ಕರಡು ಅಧಿಸೂಚನೆಯನ್ನು ಪ್ರಕಟಿಸಿತ್ತಲ್ಲದೆ, ಆ ಪ್ರದೇಶಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಿತ್ತು.
ಆದರೆ ಪರಿಸರ ಸೂಕ್ಷ್ಮ ಪ್ರದೇಶಗಳ ಗುರುತಿಸುವಿಕೆಗೆ ಸಂಬಂಧಿಸಿದ ಕರಡು ಅಧಿಸೂಚನೆಯಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳಿಗೆ ಕೆಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿದ್ದವು. ಅದಕ್ಕಾಗಿ ಹೊಸ ಸಮಿತಿ ರಚಿಸಲಾಗಿತ್ತು.
ಮಾಧವ್ ಗಾಡ್ಗೀಳ್ ಅಧ್ಯಕ್ಷತೆಯ ಸಮಿತಿ ವರದಿ ಸಲ್ಲಿಸಿದ 12 ವರ್ಷಗಳ ಬಳಿಕ ಮತ್ತು ಕಸ್ತೂರಿ ರಂಗನ್ ನೇತೃತ್ವದ ಸಮಿತಿ ವರದಿ ಸಲ್ಲಿಸಿದ ಒಂದು ದಶಕದ ಬಳಿಕ ಸರ್ಕಾರ ಹೊಸ ಸಮಿತಿಯನ್ನು ನೇಮಿಸಿತ್ತು. ಕಳೆದ ವರ್ಷ ತನ್ನ ವರದಿ ಸಲ್ಲಿಸಬೇಕಿದ್ದ ಸಮಿತಿಯು, ಇನ್ನಷ್ಟು ಕಾಲಾವಕಾಶ ಕೇಳಿತ್ತು.
'ಈ ಹಿಂದಿನ ಕರಡು ಅಧಿಸೂಚನೆಯಿಂದ ಆಗಿರುವ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಅರಣ್ಯ ಸಚಿವಾಲಯದ ಮಾಜಿ ಮಹಾನಿರ್ದೇಶಕ ಸಂಜಯ್ ಕುಮಾರ್ ನೇತೃತ್ವದ ಮತ್ತೊಂದು ಸಮಿತಿಯನ್ನು ನೇಮಿಸಲಾಗಿದೆ. ಹೊಸ ಸಮಿತಿಯು ತೃಪ್ತಿಕರ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂಬುದು ನನ್ನ ನಂಬಿಕೆ' ಎಂದು ಈ ವಿಷಯದ ಕುರಿತ ಪ್ರಶ್ನೆಯೊಂದಕ್ಕೆ ಪರಿಸರ ಸಚಿವರು ಉತ್ತರಿಸಿದರು.