ಮುಳ್ಳೇರಿಯ: ಕಾರಡ್ಕ ಜಿ.ವಿ.ಎಚ್.ಎಸ್.ಎಸ್. ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಅನ್ವಿತ ಆರ್.ವಿ. ಕೇರಳ ರಾಜ್ಯ ಶಾಲಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈಕೆ ಕಾಸರಗೋಡು ಜಿಲ್ಲಾ ಶಾಲಾ ಕ್ರಿಕೆಟ್ ತಂಡದ ನಾಯಕಿಯಾಗಿದ್ದಾರೆ. ಈ ಎರಡೂ ತಂಡಕ್ಕೆ ಆಯ್ಕೆಯಾದ ಕಾಸರಗೋಡಿನ ಏಕಮಾತ್ರ ಆಟಗಾರ್ತಿಯಾಗಿದ್ದಾರೆ.
ಕಾರಡ್ಕ ನೆಚ್ಚಿಪಡ್ಪು ರಾಮಚಂದ್ರ-ವಿದ್ಯಾ ದಂಪತಿಗಳ ಕಿರಿಯ ಪುತ್ರಿಯಾದ ಅನ್ವಿತ ಆರ್.ವಿ. ಕ್ರಿಕೆಟ್ನಲ್ಲಿ ಪ್ರತಿಭಾನ್ವಿತರಾಗಿದ್ದಾರೆ. ತನ್ನ 14 ನೇ ವಯಸ್ಸಿನಲ್ಲಿ ತಂದೆಯ ಮಾರ್ಗದರ್ಶನ ಮತ್ತು ತರಬೇತಿಯ ಮೂಲಕ ಕ್ರಿಕೆಟ್ ಆಡಲು ಆರಂಭಿಸಿದ್ದು, ತನ್ನ ಮೊದಲ ಪ್ರಯತ್ನದಲ್ಲೇ ಜಿಲ್ಲಾ ತಂಡಕ್ಕೆ ಆಯ್ಕೆಯಾಗಿದ್ದು, ಈ ಹಿಂದೆ ಜಿಲ್ಲಾ ತಂಡದ ಉಪನಾಯಕಿಯಾಗಿಯೂ, 15 ವರ್ಷಕ್ಕಿಂತ ಕೆಳಗಿನ ಉತ್ತರ ವಲಯ ತಂಡದಲ್ಲಿ ಕಳೆದ 2 ಸಲವೂ, 19 ವರ್ಷ ಕೆಳಗಿನ ಉತ್ತರ ವಲಯ ತಂಡದಲ್ಲೂ ಭಾಗವಹಿಸಿದ್ದಾರೆ. 19 ವರ್ಷ ಕೆಳಗಿನ ಪಂದ್ಯದಲ್ಲಿ ಔಟಾಗದೇ 51 ರನ್ ಹಾಗು 5 ಓವರ್ಗಳಲ್ಲಿ 13 ರನ್ ಕೊಟ್ಟು 1 ವಿಕೆಟ್ ಪಡೆದದ್ದು ವಿಶೇಷ ಸಾಧನೆಯಾಗಿದೆ. ಕೆ.ಸಿ.ಎ. 15 ವರ್ಷಕ್ಕಿಂತ ಕಿರಿಯ ರಾಜ್ಯ ಆಯ್ಕೆ ತಂಡದಲ್ಲಿ ಭಾಗವಹಿಸಿದ್ದಾರೆ. ಕಾಸರಗೋಡಿನ ಜಾಸ್ಮಿನ್ ಕ್ರಿಕೆಟ್ ಅಸೋಸಿಯೇಶನ್ನ ಶದಾಬ್ ಖಾನ್ ಕೋಚ್ ಆಗಿದ್ದಾರೆ.