ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಕಲಾಸಂಘದ 79ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಬನಾರಿ ಮತ್ತು ಶ್ರೀ ವಾಗ್ದೇವಿ ಭಜನಾ ಮಂಡಳಿ ಕಾವು ಅವರ ಸಹಭಾಗಿತ್ವದಲ್ಲಿ ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆಯವರ ಮಾರ್ಗದರ್ಶನದಲ್ಲಿ ಮನೋಜ್ಞವಾದ, ಭಾವಪೂರ್ಣವಾದ ಭಜನಾ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಕಾಟುಕುಕ್ಕೆಯವರನ್ನು ಸಂಘದ ಮತ್ತು ಭಜನಾ ಮಂಡಳಿಯ ಪರವಾಗಿ ಶಾಲು ಹೊದಿಸಿ, ಫಲ ಸಮರ್ಪಣೆಯೊಂದಿಗೆ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿಯವರು ಉಪಸ್ಥಿತರಿದ್ದು ಅತ್ಯದ್ಭುತವಾದಂತಹ ಭಜನಾ ಕಾರ್ಯಕ್ರಮವೊಂದನ್ನು ಕೇಳುವ ಸುಯೋಗ ದೇಲಂಪಾಡಿಯ ಸಾಮಾಜಿಕರಿಗೆಲ್ಲಾ ಪ್ರಾಪ್ತವಾದುದಕ್ಕೆ ಅಭಿನಂದಿಸಿ ಕಾಟುಕುಕ್ಕೆಯವರ ಸಾಧನೆಯನ್ನು ಪ್ರಶಂಸಿಸಿದರು. ಗೌರವವನ್ನು ಸ್ವೀಕರಿಸಿ ಮಾತಾಡಿದ ರಾಮಕೃಷ್ಣ ಕಾಟುಕುಕ್ಕೆಯವರು ಭಕ್ತಿಯೇ ಶಕ್ತಿಯಾಗಿರುವ ವಿಭಜನೆಯಿಲ್ಲದ ಭಜನೆಯ ವೈಶಿಷ್ಟ್ಯವನ್ನು ಉಲ್ಲೇಖಿಸಿ ಶುಭಹಾರೈಸಿದರು.
ಚಂದ್ರಶೇಖರ ಏತಡ್ಕ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಸದಸ್ಯೆ ಪೂರ್ಣಿಮಾ ಬನಾರಿ ಸ್ವಾಗತಿಸಿ, ಶ್ರೀವಾಗ್ದೇವಿ ಭಜನಾ ಮಂಡಳಿ ಕಾವು ಇದರ ಸದಸ್ಯೆ ಗೀತಾ ಮನಮೋಹನ ವಂದಿಸಿದರು.




