ನವದೆಹಲಿ: 'ಕೆಂಪು ಸಮುದ್ರದ ಬಿಕ್ಕಟ್ಟು ದೇಶದ ರಸಗೊಬ್ಬರ ಪೂರೈಕೆಯ ಮೇಲೆ ಪರಿಣಾಮ ಬೀರಿಲ್ಲ. ಖಾರೀಫ್ ಅವಧಿಗೆ ಅಗತ್ಯವಿರುವಷ್ಟು ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ' ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ಸುಖ್ ಮಾಂಡವೀಯ ಹೇಳಿದರು.
0
samarasasudhi
ಜನವರಿ 18, 2024
ನವದೆಹಲಿ: 'ಕೆಂಪು ಸಮುದ್ರದ ಬಿಕ್ಕಟ್ಟು ದೇಶದ ರಸಗೊಬ್ಬರ ಪೂರೈಕೆಯ ಮೇಲೆ ಪರಿಣಾಮ ಬೀರಿಲ್ಲ. ಖಾರೀಫ್ ಅವಧಿಗೆ ಅಗತ್ಯವಿರುವಷ್ಟು ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ' ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ಸುಖ್ ಮಾಂಡವೀಯ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಸದ್ಯ 70 ಲಕ್ಷ ಟನ್ ಯೂರಿಯಾ, 20 ಲಕ್ಷ ಟನ್ ಡಿಎಪಿ, 10 ಲಕ್ಷ ಟನ್ ಎಂಒಪಿ (ಮ್ಯೂರೇಟ್ ಆಫ್ ಪೊಟ್ಯಾಷ್), 40 ಲಕ್ಷ ಟನ್ ಎನ್ಪಿಕೆ ಮತ್ತು 20 ಲಕ್ಷ ಟನ್ ಎಸ್ಎಸ್ಪಿ (ಸಿಂಗಲ್ ಸೂಪರ್ ಫಾಸ್ಪೇಟ್) ದಾಸ್ತಾನಿದೆ.
ದೇಶದಲ್ಲಿ 2023-24ನೇ ಹಣಕಾಸು ವರ್ಷದಲ್ಲಿ ರಸಗೊಬ್ಬರದ ಮೇಲಿನ ಸಬ್ಸಿಡಿ ಮೊತ್ತವು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 30ರಿಂದ 34ರಷ್ಟು ಇಳಿಕೆಯಾಗಲಿದೆ ಎಂದರು.
ಹಿಂದಿನ ಹಣಕಾಸು ವರ್ಷದಲ್ಲಿ ಸಬ್ಸಿಡಿ ಮೊತ್ತವನ್ನು ₹2.56 ಲಕ್ಷ ಕೋಟಿಗೆ ನಿಗದಿಪಡಿಸಲಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ₹1.70 ಲಕ್ಷ ಕೋಟಿಯಿಂದ ₹1.80 ಲಕ್ಷ ಕೋಟಿಗೆ ಇಳಿಕೆಯಾಗಲಿದೆ ಎಂದು ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ಬೆಲೆ ಇಳಿಕೆ ಹಾಗೂ ಯೂರಿಯಾ ಆಮದು ಪ್ರಮಾಣ ಕಡಿಮೆಯಾಗಿರುವುದೇ ಇದಕ್ಕೆ ಕಾರಣ ಎಂದರು. ಕಳೆದ ವರ್ಷ 70 ಲಕ್ಷ ಟನ್ನಷ್ಟು ಯೂರಿಯಾ ಆಮದು ಮಾಡಿಕೊಳ್ಳಲಾಗಿತ್ತು. ಈ ಹಣಕಾಸು ವರ್ಷದಲ್ಲಿ 40ರಿಂದ 50 ಲಕ್ಷ ಟನ್ ಆಮದಿಗೆ ನಿರ್ಧರಿಸಲಾಗಿದೆ ಎಂದರು.