ನ್ಯೂಯಾರ್ಕ್: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಮತ್ತು ಬಾಲರಾಮ ದೇವರ ಪ್ರಾಣ ಪ್ರತಿಷ್ಠಾಪನೆಯು ಭಾರತೀಯರು ಮಾತ್ರವಲ್ಲ, ಇಡೀ ವಿಶ್ವದಾದ್ಯಂತ ಜಾತಿ, ಮತ ಭೇದ ಮರೆತು ಜನರು ಕಣ್ತುಂಬಿಕೊಂಡು ಸಂತಸ ಪಟ್ಟಿದ್ದಾರೆ. ಆದರೆ ಪಾಪಿ ಪಾಕಿಸ್ತಾನ ಆಕ್ರೋಶದಿಂದ ಕುದಿಯುತ್ತಿದೆ.
ಶ್ರೀರಾಮ ಮಂದಿರ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿ ಕಿರಿಕ್ ಮಾಡಲು ಪ್ರಯತ್ನಿಸಿದೆ.
ನ್ಯೂಯಾರ್ಕ್ನಲ್ಲಿ ನಡೆದ ವಿಶ್ವಸಂಸ್ಥೆ ನಾಗರಿಕತೆಯ ಒಕ್ಕೂಟ (ಯುಎನ್ ಅಲೈಯೆನ್ಸ್ ಆಫ್ ಸಿವಿಲೈಸೇಷನ್ಸ್) ರಾಯಭಾರಿಗಳ ಸಭೆಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ಭಾರತದ ವ್ಯವಹಾರಗಳಲ್ಲಿ ಮೂಗು ತೂರಿಸಲು ಯತ್ನಿಸಿದೆ. ಪಾಕಿಸ್ತಾನದ ವಿಶ್ವಸಂಸ್ಥೆಯ ರಾಯಭಾರಿ ಮುನೀರ್ ಅಕ್ರಮ್, ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ವಿಷಯವನ್ನು ಪ್ರಸ್ತಾಪಿಸಿದ್ದು, ಭಾರತದಲ್ಲಿನ ಮುಸ್ಲಿಮರ ಜೀವಕ್ಕೆ ಆತಂಕವಿದ್ದು, ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಬೇಕು ಎಂದು ಮನವಿ ಮಾಡಿದರು.
ಇದಷ್ಟೇ ಅಲ್ಲ, ಎಓಸಿಯ ಅಧಿಕಾರಿ ಮಿಗುಯೆಲ್ ಏಂಜೆಲ್ ಮೊರಾಟಿನೋಸ್ ಅವರಿಗೆ ಬರೆದ ಪತ್ರದಲ್ಲಿ ಅಕ್ರಮ್, ರಾಮ ಮಂದಿರದ ನಿರ್ಮಾಣ ಮತ್ತು ಪ್ರತಿಷ್ಠೆಯನ್ನು ಖಂಡಿಸಿದ್ದಾರೆ.ಈ ಪ್ರವೃತ್ತಿಯು ಭಾರತೀಯ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಯೋಗಕ್ಷೇಮಕ್ಕೆ, ಸಾಮರಸ್ಯ ಮತ್ತು ಶಾಂತಿಗೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ ಎಂದು ಅವರು ಇಸ್ಲಾಮಿಕ್ ಸಹಕಾರ ಸಂಘಟನೆಯ ಸಭೆಯಲ್ಲಿ ಹಂಚಿಕೊಂಡ ಪತ್ರದಲ್ಲಿ ಆರೋಪಿಸಿದ್ದಾರೆ.
ಭಾರತದ ಆಂತರಿಕ ವ್ಯವಹಾರಗಳಲ್ಲಿ ಪಾಕಿಸ್ತಾನವು ಹಸ್ತಕ್ಷೇಪ ನಡೆಸುತ್ತಿರುವುದು ಇದು ಮೊದಲಲ್ಲ. ಈ ಹಿಂದೆ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಅಂತರಾಷ್ಟ್ರೀಯಗೊಳಿಸುವ ಅದರ ಪ್ರಯತ್ನ ವಿಫಲವಾಗಿತ್ತು. ಬಾಲರಾಮ ದೇವರ ಪ್ರಾಣಪ್ರತಿಷ್ಠೆಯ ಬಳಿಕ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಈ ಬಗ್ಗೆ ತಗಾದೆ ತೆಗೆದಿತ್ತು.