ಬದಿಯಡ್ಕ: ಇಕ್ಕೇರಿ ಶ್ರೀ ಶಂಕರನಾರಾಯಣ ದೇವಸ್ಥಾನದ ವಾರ್ಷಿಕೋತ್ಸವ ಮಾರ್ಚ್ 18ರಂದು ಜರಗಲಿದೆ. ಅಂದು ಪೂರ್ವಾಹ್ಣ ಗಣಪತಿ ಹೋಮ, ಶಂಕರನಾರಾಯಣ ಹವನ, ಶತರುದ್ರಾಭಿಷೇಕ, ನವಕಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಅಪರಾಹ್ಣ 4.30ಕ್ಕೆ ಕರಿಂಬಿಲ ಲಕ್ಷ್ಮಣಪ್ರಭು ಮತ್ತು ಬಳಗದವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 6.40ಕ್ಕೆ ದೀಪಾರಾಧನೆ, ರಾತ್ರಿ 8ಕ್ಕೆ ಕಾರ್ತಿಕಪೂಜೆ, ಮಾರ್ಚ್ 19ರಂದು ಶ್ರೀ ಧೂಮಾವತಿ ಮುಂತಾದ ದೈವಗಳ ಕೋಲ ಜರಗಲಿದೆ. ಏಪ್ರಿಲ್ 11ರಂದು ಗುರುವಾರ ಪ್ರತಿಷ್ಠಾದಿನದಂದು ಶ್ರೀ ದೈವಗಳಿಗೆ ತಂಬಿಲ, ಶ್ರೀಶಂಕರನಾರಾಯಣ ದೇವರಿಗೆ ಏಕಾದಶ ರುದ್ರಾಭಿಷೇಕ ಜರಗಲಿದೆ. ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಹಾಗೂ ದೈವಗಳ ಪ್ರಸಾದವನ್ನು ಸ್ವೀಕರಿಸಬೇಕು ಎಂದು ಶ್ರೀಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಕ್ಕೇರಿ ಕ್ಷೇತ್ರ ರಸ್ತೆ ಶ್ರಮದಾನ, ನಾಮಫಲಕ ಅಳವಡಿಕೆ:
ಬಾಂಜತ್ತಡ್ಕ ಇಕ್ಕೇರಿ ಶ್ರೀ ಶಂಕರನಾರಾಯಣ ದೇವಸ್ಥಾನದ ರಸ್ತೆಯ ಎರಡೂ ಬದಿಯ ಕಾಡುಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು. ಮಾರ್ಚ್ 18ರಂದು ಶ್ರೀಕ್ಷೇತ್ರದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸ್ಥಳೀಯ ಕಾರ್ಯಕರ್ತರು ಶ್ರಮದಾನಗೈದರು. ಇದೇ ವೇಳೆ ಶ್ರೀಕ್ಷೇತ್ರಕ್ಕೆ ತೆರಳುವ ರಸ್ತೆಬದಿಯಲ್ಲಿ ನಾಮಫಲಕವನ್ನು ಅಳವಡಿಸಲಾಯಿತು. ಸೇವಾಸಮಿತಿ ಅಧ್ಯಕ್ಷ ಮೈರ್ಕಳ ನಾರಾಯಣ ಭಟ್, ಕಾರ್ಯದರ್ಶಿ ಉದನೇಶ್ವರ ಇಕ್ಕೇರಿ, ಬಾಲಕೃಷ್ಣ ಭಟ್ ಇಕ್ಕೇರಿ, ಪ್ರಧಾನ ಅರ್ಚಕ ನಾರಾಯಣ ಭಟ್, ಪ್ರಕಾಶ್ ಇಕ್ಕೇರಿ, ಈಶ್ವರ ನಾಯ್ಕ, ಶಿವಪ್ರಸಾದ್ ಮೈರ್ಕಳ, ಶಶಾಂಕ ಮೊದಲಾದವರು ಪಾಲ್ಗೊಂಡಿದ್ದರು.