ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿರುವ ತೀರ್ಪುಗಳು ಬಹುಕಾಲದಿಂದ ಚಾಲ್ತಿಯಲ್ಲಿ ಇದ್ದರೂ ಅವುಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸಬಹುದು ಎಂದು ಏಳು ನ್ಯಾಯಮೂರ್ತಿಗಳ ಪೀಠವು ಹೇಳಿದೆ.
1998ರ ಪ್ರಕರಣದ ತೀರ್ಪನ್ನು ಪುನರ್ ಪರಿಶೀಲನೆಗೆ ಒಳಪಡಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಸಮಾಜದಲ್ಲಿನ ವ್ಯವಸ್ಥೆಯ ಮೇಲೆ ಅದರಿಂದ ಆಗುವ ಪರಿಣಾಮದ ಬಗ್ಗೆ ಅವಲೋಕಿಸಿದೆ. ಅಲ್ಲದೆ, ಸಾರ್ವಜನಿಕ ಜೀವನದಲ್ಲಿ ಸಚ್ಚಾರಿತ್ರ್ಯವನ್ನು ಕಾಪಾಡುವ ಅಗತ್ಯದ ಬಗ್ಗೆಯೂ ಗಮನ ಹರಿಸಿದೆ.
ಒಂದು ತೀರ್ಪು ಎಷ್ಟು ವರ್ಷಗಳಿಂದ ಚಾಲ್ತಿಯಲ್ಲಿ ಇದೆ ಎಂಬುದು ಮುಖ್ಯವಲ್ಲ ಎಂದು ಪೀಠವು ಹೇಳಿದೆ. 'ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿದ ಕೆಲವು ತೀರ್ಪುಗಳು ಬಹುಕಾಲದಿಂದ ಚಾಲ್ತಿಯಲ್ಲಿ ಇದ್ದಿದ್ದರೂ, ಅಂತಹ ತೀರ್ಪುಗಳು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಇರಲಿಲ್ಲ ಎಂದಾದರೆ ಅವುಗಳನ್ನು ಅಸಿಂಧುಗೊಳಿಸುವ ಕೆಲಸವನ್ನು ಈ ನ್ಯಾಯಾಲಯ ಮಾಡಿದೆ' ಎಂದು ಪೀಠವು ಸ್ಪಷ್ಟಪಡಿಸಿದೆ.
ಸಾರ್ವಜನಿಕರ ಒಳಿತಿಗೆ ಕೆಟ್ಟದನ್ನು ಮಾಡುವ ರೀತಿಯಲ್ಲಿ ಒಂದು ತಪ್ಪು ಉಳಿದುಕೊಳ್ಳಲು ಬಿಡಲಾಗದು ಎಂದು ಕೋರ್ಟ್ ಹೇಳಿದೆ.
'ತಪ್ಪು ಇದೆ ಎಂಬ ಅಭಿಪ್ರಾಯ ಕೋರ್ಟ್ಗೆ ಮೂಡಿದಲ್ಲಿ ತಾನೇ ಹಿಂದೆ ನೀಡಿದ್ದ ತೀರ್ಪುಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸಲು ಈ ಕೋರ್ಟ್ಗೆ ಅವಕಾಶ ಇದೆ. ಅಥವಾ, ತೀರ್ಪಿನ ಪರಿಣಾಮವು ಸಾರ್ವಜನಿಕರ ಹಿತಾಸಕ್ತಿಗೆ ಧಕ್ಕೆ ತರುವಂಥದ್ದಾಗಿದ್ದರೆ ಅಂತಹ ತೀರ್ಪನ್ನು ಮರುಪರಿಶೀಲಿಸಬಹುದು. ಸಂವಿಧಾನದ ತಾತ್ವಿಕತೆಗೆ ವಿರುದ್ಧವಾಗಿ ಇರುವ ತೀರ್ಪುಗಳನ್ನು ಕೂಡ ಮರುಪರಿಶೀಲಿಸಬಹುದು' ಎಂದು ನ್ಯಾಯಪೀಠವು ಹೇಳಿದೆ.
ತೀರ್ಪುಗಳ ಮರುಪರಿಶೀಲನೆಯ ಕೆಲಸವನ್ನು ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಈ ನ್ಯಾಯಾಲಯವು ಸ್ವಇಚ್ಛೆಯಿಂದ ಮಾಡುತ್ತದೆ. ಏಕೆಂದರೆ ಎದ್ದು ಕಾಣುವಂತಹ ತಪ್ಪನ್ನು ಸರಿಪಡಿಸದೆ ಇದ್ದರೆ ಅದರಿಂದ ಸಾರ್ವಜನಿಕ ಹಿತಕ್ಕೆ ಧಕ್ಕೆ ಆಗುತ್ತದೆ' ಎಂದು ಪೀಠವು ವಿವರಿಸಿದೆ.
ಶಾಸನಸಭೆಗಳ ವಿಚಾರವಾಗಿ ಸಂವಿಧಾನದಲ್ಲಿ ವಿವರಿಸಿರುವ ಅಧಿಕಾರ, ಹಕ್ಕು ಮತ್ತು ರಕ್ಷಣೆಗಳನ್ನು ಕಡಿಮೆ ಮಾಡುವ ಕೆಲಸವನ್ನು ಈ ತೀರ್ಪು ಮಾಡುವುದಿಲ್ಲ. ಆದರೆ, ಈ ತೀರ್ಪು ಸಂವಿಧಾನದ 105 ಹಾಗೂ 194ನೇ ವಿಧಿಗಳ ಸರಿಯಾದ ವ್ಯಾಖ್ಯಾನಕ್ಕೆ ಸಂಬಂಧಿಸಿದೆ ಎಂದು ಸ್ಪಷ್ಟಪಡಿಸಿದೆ.