ಮಧೂರು: ಶ್ರದ್ಧೆ, ಭಕ್ತಿಯಿಂದ ನಿರಂತರ ಭಜನಾ ಸಂಕೀರ್ತನೆ ಮಾಡುವುದರಿಂದ ಸಾನಿಧ್ಯ ವೃದ್ಧಿಯಾಗುತ್ತದೆ. ಧ್ಯಾನಾತ್ಮಕ ಚಿಂತನೆ, ಚೈತನ್ಯಕ್ಕೆ ಕಾರಣವಾಗುತ್ತದೆ. ಬಡವ, ಬಲ್ಲಿದ ಎಂಬ ಬೇಧವಿಲ್ಲದೆ ಸರ್ವ ಭಕ್ತರನ್ನು ಭಗವಂತ ಅನುಗ್ರಹಿಸುತ್ತಾನೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿ ಕಾಸರಗೋಡು ನೇತೃತ್ವದಲ್ಲಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ನವೀಕರಣ ಸಮಿತಿ ಮತ್ತು ಮಧೂರು ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಸಹಕಾರದೊಂದಿಗೆ ನಡೆಯುತ್ತಿರುವ ಮಂಡಲ ಸಂಕೀರ್ತನೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿ ನುಡಿದರು.
ಕಲಿಯುಗದಲ್ಲಿ ಭಜನಾ ನಾಮ ಸಂಕೀರ್ತನೆಗೆ ಬಹಳಷ್ಟು ಮಹತ್ವವಿದೆ. ಈ ಮಹತ್ವವನ್ನು ದಾಸವರೇಣ್ಯರು ಸಾಧಿಸಿ ತೋರಿಸಿದ್ದಾರೆ. ಭಜನೆ ಸಂದೇಶವನ್ನು ಅರ್ಥೈಸಿಕೊಂಡು ಸುಶ್ರಾವ್ಯವಾಗಿ ಹಾಡಿದಾಗ ಪ್ರತಿಯೊಂದು ಕಿವಿಯು ಸಂಕೀರ್ತನೆಯನ್ನು ಆಸ್ವಾದಿಸುತ್ತದೆ. ಭಜನೆಯಿಂದ ಸೇವೆ, ಭಾವಶುದ್ಧಿ, ಸೌಹಾರ್ದತೆ ಉಂಟಾಗುತ್ತದೆ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು.
ಭಜನಾ ಸಂಕೀರ್ತನೆಯಿಂದ ಮಾನವೀಯ ಮೌಲ್ಯಗಳು ವೃದ್ಧಿಯಾಗುತ್ತದೆ. ಸಂಕೀರ್ತನೆಯಿಂದ ಮಠ, ಮಂದಿರಗಳ ಜೀರ್ಣೋದ್ಧಾರ ಕಾರ್ಯಗಳು ಕ್ಷಿಪ್ರ ಪ್ರಗತಿ ಕಾಣುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಕುಂಬಳೆ ಕಣಿಪುರ ದೇವಸ್ಥಾನ ಹಾಗು ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನ. ಒಗ್ಗಟ್ಟಿನಿಂದ ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಳ್ಳುವುದರಿಂದ ಭಾವೈಕ್ಯತೆ ಉಂಟಾಗುತ್ತದೆ ಎಂದು ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮಧೂರು ಕ್ಷೇತ್ರ ನವೀಕರಣ ಸಮಿತಿ ಉಪಾಧ್ಯಕ್ಷ ಡಾ.ಬಿ.ಎಸ್.ರಾವ್ ಅಧ್ಯಕ್ಷತೆ ವಹಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ಗೌರವ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಕಾಮತ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಟಿ. ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ.ಧನಂಜಯ ಭಟ್ ಪಿ.ಕೆ. ಅವರಿಗೆ ಗೌರವಾಭಿನಂದನೆ ನಡೆಯಿತು. ಶ್ರೀ ಕ್ಷೇತ್ರದಲ್ಲಿ 48 ದಿನಗಳ ಕಾಲ ನಡೆದ ಮಂಡಲ ಸಂಕೀರ್ತನೋತ್ಸವದಲ್ಲಿ ಭಾಗವಹಿಸಿದ ತಂಡಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಪದಾಧಿಕಾರಿಗಳಾದ ಅಪ್ಪಯ್ಯ ನಾೈಕ್ ಸ್ವಾಗತಿಸಿ, ಮೋಹನ ಏರಿಕ್ಕಳ ವಂದಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭಜನಾ ಸಂಕೀರ್ತನೆ ನಡೆಯಿತು.