ಬದಿಯಡ್ಕ: ನಾಲ್ಕು ಗೋಡೆಗಳ ಮಧ್ಯೆ ಪಠ್ಯ ಚಟುವಟಿಕೆಗಳ ಜೊತೆಜೊತೆಯಲ್ಲಿ ಸದಾ ಕ್ರಿಯಾತ್ಮಕ, ಜೀವನೋಲ್ಲಾಸದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವ ಈ ಶಾಲೆಯಲ್ಲಿ ಸ್ವರೂಪ ಶಿಕ್ಷಣ ಸ್ಮøತಿ ಕಮ್ಮಟ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿರುವುದು ಶ್ಲಾಘನೀಯ. ಈ ವಿದ್ಯಾಸಂಸ್ಥೆ ನಿರಂತರವಾಗಿ ಇಂತಹ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾ ಮುಂದೆ ಸಾಗಲಿ. ಸ್ವರೂಪದಿಂದ ವಿದ್ಯಾರ್ಥಿಗಳಿಗೆ ಹೊಸರೂಪ ಬರಲಿ ಎಂದು ನಿವೃತ್ತ ಬ್ಯಾಂಕ್ ಪ್ರಬಂಧಕ ಹಾಗೂ ಯಕ್ಷಿಣಿಗಾರ ಪ್ರೊ. ಮಾಧವ್ ಉಬ್ರಂಗಳ ಹೇಳಿದರು.
ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ಕಳೆದ ಎಂಟು ದಿನಗಳಿಂದ ನಡೆದ ಗೋಪಾಡ್ಕರ್ ಸ್ವರೂಪ ಸ್ಮøತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಅವರು ಪಾಲ್ಗೊಂಡು ಮಾತನಾಡಿದರು.
ಹಳೆಯ ನೆನಪುಗಳನ್ನು ಕೆದಕುತ್ತಾ ಬದಿಯಡ್ಕದಲ್ಲಿ ಸಮಾಜಮುಖೀ ಕಾರ್ಯಚಟುವಟಿಕೆಗಳ ಸ್ವಾದವನ್ನು ಹಂಚಿಕೊಂಡರು. ಸಾಹಿತಿ ಗುರುರಾಜ ಮಾರ್ಪಳ್ಳಿ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಅಗಾಧ ಚೈತನ್ಯವನ್ನು ಗುರುತಿಸಿ ಪ್ರಕಟಪಡಿಸಿ ತನ್ಮೂಲಕ ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸ್ವರೂಪ ಶಿಕ್ಷಣ ಸಂಸ್ಥೆ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದಕ್ಕೆ ಈ ಶಿಬಿರವು ಸಾಕ್ಷಿಯಾಗಿದೆ. ಇಲ್ಲಿಗೆ ಮಾತ್ರವಲ್ಲದೆ ರಾಜ್ಯಾದ್ಯಂತ ಇವುಗಳ ಪ್ರಯೋಜನವನ್ನು ಎಲ್ಲ ವಿದ್ಯಾರ್ಥಿಗಳು ಪಡೆಯುವಂತಾಗಲಿ ಎಂಬ ಸಂದೇಶವನ್ನು ನೀಡಿದರು. ಇಲ್ಲಿನ ವಿದ್ಯಾಸಂಸ್ಥೆ ಮಕ್ಕಳನ್ನು ಬೆಳೆಸುವಂತಹ ವಿಧಾನ ಅತ್ಯದ್ಭುತವಾಗಿದೆ. ಅವಕಾಶಗಳನ್ನು ಇಲ್ಲಿನ ಮಕ್ಕಳಿಗೆ ನೀಡುತ್ತಿರುವುದು ಮುಖ್ಯೋಪಾಧ್ಯಾಯರ ಹಿರಿಮೆಯೇ ಸರಿ. ಅದಕ್ಕೆ ನಾನೇ ಸಾಕ್ಷಿ ಎಂದು ಪ್ರಸ್ತುತ ಉದ್ಯೋಗದಲ್ಲಿರುವ ಪೂರ್ವವಿದ್ಯಾರ್ಥಿ ಕಾರ್ತಿಕ ಕೃಷ್ಣ ಕಾಡಮನೆ ಪಾಲ್ಗೊಂಡು ಶುಭಸಂದೇಶ ನೀಡಿದರು.
ನಿವೃತ್ತ ಪ್ರಾಂಶುಪಾಲ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಶಾಲಾ ಆಡಳಿತ ಮಂಡಳಿ ಸಂಚಾಲಕ ಜಯಪ್ರಕಾಶ ಪಜಿಲ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಚಟುವಟಿಕೆಗಳನ್ನು ಆಯೋಜಿಸುವುದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಕಂಡೆತ್ತೋಡಿ, ಡಾ. ವೈ.ವಿ. ಕೃಷ್ಣಮೂರ್ತಿ, ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್, ಸುಮಾಡ್ಕರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. 9ನೇ ತರಗತಿಯ ಶ್ರೇಯಾ ಕೆ., 8ನೇ ತರಗತಿಯ ಕುಶಿ ರೈ ಕಾರ್ಯಕ್ರಮ ನಿರೂಪಿಸಿದರು. 8ನೇ ತರಗತಿಯ ವಿಷ್ಣು ರಂಜನ್ ಚಾಳೆತ್ತಡ್ಕ ಸ್ವಾಗತಿಸಿ, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ವಂದಿಸಿದರು. ಇದೇ ಸಂದರ್ಭ ಸ್ವರೂಪ ಅಧ್ಯಯನ ಸಂಸ್ಥೆಯ ಎಲ್ಲ ಸದಸ್ಯರನ್ನು ಶಾಲಾ ಆಡಳಿತ ಮಂಡಳಿಯಿಂದ ಗೌರವಿಸಲಾಯಿತು.