ಕುಂಬಳೆ: ಕಾಸರಗೋಡಿನ ರಂಗ ಚೇತನದ ವತಿಯಿಂದ ಕನ್ನಡ ಶಾಲಾ ವಿದ್ಯಾರ್ಥಿಗಳ ರಂಗ ಕೌಶಲ್ಯಗಳಿಗ ಪ್ರೋತ್ಸಾಹ ನಿಡುವ ನಿಟ್ಟಿನಲ್ಲಿ ಅಯೋಜಿಸಲಾಗುವ ರಂಗದ ರಂಗೋಲಿ "ಚಿತ್ತಾರ -2024" ತ್ರಿದಿನ ಸನಿವಾಸ ಶಿಬಿರ ಧರ್ಮತ್ತಡ್ಕದ ಶ್ರೀದುರ್ಗಾಪರಮೇಶ್ವರೀ ಪ್ರೌಢ ಶಾಲೆಯಲ್ಲಿ ಬುಧವಾರ ಆರಂಭಗೊಂಡಿತು.
ದ.ಕ.ಜಿಲ್ಲಾ ರಾಜ್ಯೋತ್ಸವ ಪುರಸ್ಕøತ ತುಳು ರಂಗ, ಚಲನಚಿತ್ರ ನಟ ರವಿ ರಾಮಕುಂಜ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಗಾಗಿ ಅಧ್ಯಾಪಕರು ಆಸಕ್ತಿವಹಿಸಿ ಮಾಡುತ್ತಿರುವ ಇಂತಹ ಕಾರ್ಯ ಚಟುವಟಿಕೆ ಶ್ಲಾಘನೀಯ. ಗಡಿನಾಡಿನಲ್ಲಿ ಮಕ್ಕಳ ಪ್ರತಿಭೆಗೆ ಪ್ರೇರಪಣೆಯ ಜತೆಗೆ ಕನ್ನಡದ ಉಳಿವಿಗಾಗಿ ಶ್ರಮಿಸುತ್ತಿರುವ ಬಹುದೊಡ್ಡ ಕೊಡುಗೆ ಎಂದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರ ಖ್ಯಾತಿಯ ಬಾಲಕೃಷ್ಣ ಅಡೂರು ಸಭೆಯ ಅಧ್ಯಕ್ಷತೆವಹಿಸಿದ್ದರು. ಕ.ಸಾ.ಪ.ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ,ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಪಿ.ಬಿ,ಶ್ರೀನಿವಾಸ್ ರಾವ್, ಧರ್ಮತ್ತಡ್ಕ ಶಾಲಾ ಪ್ರಬಂಧಕ ಎನ್.ಶಂಕರ ನಾರಾಯಣ ಭಟ್, ಮುಖ್ಯೋಪಾಧ್ಯಾಯ ಇ.ಎಚ್.ಗೋವಿಂದ ಭಟ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕುಡಾಲ್ ಮೊದಲಾದವರು ಮಾತನಾಡಿದರು. ಸಂಸ್ಥೆಯ ಗೌರವಾಧ್ಯಕ್ಷ ಯತೀಶ್ ಕುಮಾರ್ ರೈ ಮುಳ್ಳೇರಿಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾಶಿವ ಬಾಲಮಿತ್ರ ಸ್ವಾಗತಿಸಿ, ಆಶೋಕ್ ಕೊಡ್ಲಮೊಗರು ವಂದಿಸಿದರು. ದಿವಾಕರ ಬಲ್ಲಾಳ್ ಎ.ಬಿ. ನಿರೂಪಿಸಿದರು.
ಶಿಬಿರಾರ್ಥಿಗಳಿಗೆ ಸದಾಶಿವ ಬಾಲಮಿತ್ರ, ಬಾಲಕೃಷ್ಣ ಅಡೂರು, ರಾಷ್ಟ್ರೀಯ ನಾಟಕ ಶಾಲೆಯ ಪದವೀಧರ ಮನಿಶ್ ಪಿಂಟೋ ಮಂಗಳೂರು, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ನಿರ್ಮಲ್ ಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ತರಗತಿ ನಡೆಸಿದರು. ಕಾಸರಗೋಡು ಜಿಲ್ಲೆಯ ರಂಗಾಸಕ್ತ ಕನ್ನಡ ಮಾಧ್ಯಮ ಅಧ್ಯಾಪಕರು ರೂಪಿಸಿದ ರಂಗಚೇತನ ಸಂಸ್ಥೆಯು ಮಕ್ಕಳ ಜತೆಗೆ ಹಿರಿಯವರನ್ನು ಸೇರಿಸಿಕೊಂಡು ಕನ್ನಡ-ತುಳು ರಂಗ ಚಟುವಟಿಕೆ, ಕಿರುಚಿತ್ರ ನಿರ್ಮಾಣ ಮೊದಲಾದ ಕಾರ್ಯಗಳನ್ನು ಕೈಗೆತ್ತಿಕೊಂಡು ಯಶಸ್ವಿಯಗಿದೆ. ಕಳೆದೆರಡು ವರ್ಷದಲ್ಲಿ ಗ್ರಾಮೀಣ ಪ್ರದೇಶದ ಕನ್ನಡ ವಿದ್ಯಾರ್ಥಿಗಳನ್ನು ಆಯ್ದುಕೊಂಡು ಅವರಿಗೆ ರಂಗ ತರಬೇತಿ ನೀಡಿ ಶಾಲಾ ಕಲೋತ್ಸವ,ಡ್ರಾಮಾ ಜ್ಯೂನಿಯರ್ ಇನ್ನಿತರ ಮಕ್ಕಳ ಸ್ಪರ್ಧಾ ಕೌಶಲ್ಯಗಳಿಗೆ ಪ್ರೇರಪಣೆಯಾಗಿದೆ. ವಿಶೇಷತೆ ಎಂದರೆ ಈ ಸಂಘಟನೆಯಲ್ಲಿ ನಿವೃತ್ತ ಮತ್ತು ಪ್ರವೃತ್ತ ಕನ್ನಡ ಮಾಧ್ಯಮ ಅಧ್ಯಾಪಕರೇ ಇದ್ದುಕೊಂಡು ಶಿಬಿರದ ಸಂಪನ್ಮೂಲ ವ್ಯಕ್ತಿಗಳಿಂದ ಹಿಡಿದು ಶಿಬಿರದ ಶುಚಿತ್ವ,ಅಡುಗೆ ತಯಾರಿ ಕಾರ್ಯ ಮೊದಲಾದವುಗಳನ್ನು ಸುಸೂತ್ರವಾಗಿ ಶಿಕ್ಷಕರೇ ನಿರ್ವಹಿಸಿಕೊಳ್ಳುತ್ತಾ ಸ್ವತಃ ಸಮಾಜಕ್ಕೆ ಮಾದರಿಯಾಗಿದ್ದಾರೆ.