ಕುಂಬಳೆ: ಐ.ಐ.ಟಿ. ಮದ್ರಾಸು ಇದರ ಕನ್ನಡ ಸಾಂಸ್ಕøತಿಕ ಸಂಘದ ಆಶ್ರಯಲ್ಲಿ ಕರಾವಳಿಯ ಗಂಡುಮೆಟ್ಟಿನ ಕಲೆ ಯಕ್ಷಗಾನ ರಮ್ಯಾದ್ಭುತ ಸೃಷ್ಟಿಸಿತು. ಐ.ಐ.ಟಿ. ಸಭಾಂಗಣದಲ್ಲಿ ಕಾಸರಗೋಡಿನ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ಕಲಾವಿದರು `ಮಹಿಷಾಸುರ ವಧೆ' ಪ್ರಸಂಗವನ್ನು ಪ್ರಸ್ತುತ ಪಡಿಸಿ ಮಹಾನಗರದಲ್ಲಿ ಯಕ್ಷ ಗಂಧರ್ವ ಲೋಕ ಸೃಷ್ಟಿಸಿದರು.
ಅಧ್ಯಯನ ಕೇಂದ್ರದ ರೂವಾರಿ, ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳ ಮತ್ತು ಸಹೋದರ ಕೆ.ಎನ್.ರಾಮಕೃಷ್ಣ ಹೊಳ್ಳ ಅವರ ನೇತೃತ್ವದಲ್ಲಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಕೇರಳ ರಾಜ್ಯ ಶಾಲಾಕಲೋತ್ಸವದಲ್ಲಿ `ಎ' ಗ್ರೇಡ್ ಪಡೆದ ಕಾಸರಗೋಡು ಬಿ.ಇ.ಎಂ. ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳನ್ನೊಳಗೊಂಡ ಪ್ರತಿಭಾನ್ವಿತರ ತಂಡ ಭಾಗವಹಿಸಿತ್ತು. ರಾಕೇಶ್ ರೈ ಅಡ್ಕ ಅವರ ಸಮರ್ಥ ನಿರ್ದೇಶನದಲ್ಲಿ ಪ್ರದರ್ಶನಗೊಂಡ ಯಕ್ಷಗಾನವು ನೆರೆದ ಅಸಂಖ್ಯ ಪ್ರೇಕ್ಷಕರನ್ನು ಮೂಖ ವಿಸ್ಮಯಗೊಳಿಸಿತು. ಕಂಚಿನ ಕಂಠದ ರಾಮಕೃಷ್ಣ ಮಯ್ಯ ಕೂಡ್ಲು ಭಾಗವತರಾಗಿ ಮಿಂಚಿದರು. ಚೆಂಡೆಯಲ್ಲಿ ವಿಕ್ರಂ ಮಯ್ಯ ಮದ್ರಾಸು, ಮದ್ದಳೆಯಲ್ಲಿ ಶ್ರೀ ಕುಮಾರ ಮೀಯಪದವು, ಚಕ್ತತಾಳದಲ್ಲಿ ಕೆ.ಎನ್.ವೆಂಕಟ್ರಮಣ ಹೊಳ್ಳ ಸಹಕರಿಸಿದರು.
ದೇವೇಂದ್ರನಾಗಿ ಅನುಶ್ರೀ ಹೊಳ್ಳ, ಅಗ್ನಿಯಾಗಿ ಛಾಯಶ್ರೀ ಹೊಳ್ಳ, ವರುಣ ಮತ್ತು ಬ್ರಹ್ಮನಾಗಿ ಪ್ರೀತಿ ಕಲ್ಲೂರಾಯ, ಮಾಲಿನಿ ಮತ್ತು ಶ್ರೀದೇವಿಯಾಗಿ ಮಹಿಮಾ ಎಸ್.ರಾವ್, ದಿತಿಯಾಗಿ ಸಮನ್ವಿತಾ ಗಣೇಶ್, ಸುಪಾಶ್ವತನಾಗಿ ಮತ್ತು ಸಿಂಹದ ಪಾತ್ರದಲ್ಲಿ ಯತಿರಾಜ ಮುಳಿಯಾರು, ವಿದ್ಯುನ್ಮಾಲಿಯಾಗಿ ಅನಿಶ್ ಕುಂಡಂಗುಳಿ, ಯಕ್ಷ ಮತ್ತು ವಿಷ್ಣುವಾಗಿ ಕಿಶನ್ ಅಗ್ಗಿತ್ತಾಯ, ದೂತನಾಗಿ ರಮ್ಯಾ ಭಟ್, ಮಹಿಷಾಸುರನಾಗಿ ರಂಜಿತ್ ಗೋಳಿಯಡ್ಕ, ಶಂಕಾಸುರನಾಗಿ ಸುಬ್ರಹ್ಮಣ್ಯ ಭಟ್ ಬದಿಯಡ್ಕ, ದುರ್ಗಾಸುರನಾಗಿ ಕೆ.ವಿ.ಶೇಷಾದ್ರಿ ಹೊಳ್ಳ, ದೂತ ಮತ್ತು ಶಿವನಾಗಿ ರಮ್ಯಾ ರಾವ್ ಅದ್ಭುತ ಅಭಿನಯ ನೀಡಿದರು. ಮುಖವರ್ಣಿಕೆ ಚಂದ್ರಮೋಹನ ಕೂಡ್ಲು, ಲೋಕೇಶ್ ಸುಳ್ಯ, ವಸ್ತ್ರಾಲಂಕಾರ ಸುಧಾಕರ ಮಲ್ಲ ಸಹಕರಿಸಿದರು.